ಟೋಕಿಯೊ : ಒಲಿಂಪಿಕ್ಸ್ ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಚಿನ್ನದ ಪದಕ ದಕ್ಕಿಲ್ಲ. ದಶಕಗಳಿಂದ ಕಾಡುತ್ತಿರುವ ಈ ಕೊರಗು ತಂತ್ರಜ್ಞಾನದ ತವರಾಗಿರುವ ಟೋಕಿಯೊದಲ್ಲಿ ದೂರವಾಗುವ ನಿರೀಕ್ಷೆ ಇದೆ.
ಐದು ವರ್ಷಗಳ ಹಿಂದೆ ಸಾಂಬಾ ನಾಡಿನಲ್ಲಿ ನಡೆದಿದ್ದ ‘ಕ್ರೀಡಾ ಮೇಳ’ದಲ್ಲಿ ಬೆಳ್ಳಿಯ ಬೆಡಗು ಮೂಡಿಸಿದ್ದ ಪಿ.ವಿ.ಸಿಂಧು, ಈ ಬಾರಿ ಚಿನ್ನ ಜಯಿಸಿ ಹೊಸ ಭಾಷ್ಯ ಬರೆಯುವ ತವಕದಲ್ಲಿದ್ದಾರೆ. ಹಾಲಿ ಚಾಂಪಿಯನ್ ಕ್ಯಾರೊಲಿನ್ ಮರಿನ್ ಕೂಟದಿಂದ ದೂರ ಉಳಿದಿರುವ ಕಾರಣ ಸಿಂಧು ಚಿನ್ನದ ಹಾದಿ ಇನ್ನಷ್ಟು ಸುಗಮವಾಗಿದೆ.
ಪುರುಷರ ಸಿಂಗಲ್ಸ್ ಸ್ಪರ್ಧಿ ಬಿ.ಸಾಯಿ ಪ್ರಣೀತ್, ಪಾಲ್ಗೊಳ್ಳುತ್ತಿರುವ ಮೊದಲ ಕೂಟದಲ್ಲೇ ಪದಕದ ಸಾಧನೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಭಾರತದವರು ಪುರುಷರ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದೇ ಇದುವರೆಗಿನ ಉತ್ತಮ ಸಾಧನೆ ಎನಿಸಿದೆ. ಹೀಗಾಗಿ ಪ್ರಣೀತ್ ಮೇಲೆ ನಿರೀಕ್ಷೆ ಹೆಚ್ಚಿದೆ.
ಪುರುಷರ ಡಬಲ್ಸ್ನಲ್ಲಿ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಭಾರತದ ಸವಾಲು ಮುನ್ನಡೆಸಲಿದ್ದಾರೆ. ವಿಶ್ವ ರ್ಯಾಂಕಿಂಗ್ನಲ್ಲಿ 10ನೇ ಸ್ಥಾನದಲ್ಲಿರುವ ಇವರು ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸದಲ್ಲಿದ್ದಾರೆ.