ಬೆಂಗಳೂರು: ಹಾಲಿ ರಾಷ್ಟ್ರೀಯ ಚಾಂಪಿಯನ್ ನಿಕಿ ಪೂಣಚ್ಚ ಮತ್ತು ಪುಣೆಯ ಅರ್ಜುನ್ ಖಾಡೆ ಅವರು ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಗೆ ‘ವೈಲ್ಡ್ ಕಾರ್ಡ್’ ಅರ್ಹತೆ ಗಳಿಸಿದ್ದಾರೆ.
24 ವರ್ಷದ ನಿಕಿ ಮತ್ತು ವಿಶ್ವ ರ್ಯಾಂಕಿಂಗ್ನಲ್ಲಿ 219ನೇ ಸ್ಥಾನದಲ್ಲಿರುವ ಅರ್ಜುನ್ ಅವರು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.
‘ಬೆಂಗಳೂರು ಓಪನ್ಗೆ ‘ವೈಲ್ಡ್ ಕಾರ್ಡ್’ ಅರ್ಹತೆ ಸಿಕ್ಕಿರುವುದರಿಂದ ಅತೀವ ಖುಷಿಯಾಗಿದೆ. ತವರಿನ ಅಂಗಳದಲ್ಲಿ ಆಡಲು ಉತ್ಸುಕನಾಗಿದ್ದು, ಪ್ರಶಸ್ತಿ ಜಯಿಸಲು ಪ್ರಯತ್ನಿಸುತ್ತೇನೆ’ ಎಂದು ನಿಕಿ ತಿಳಿಸಿದ್ದಾರೆ.
‘ಈ ಬಾರಿಯ ಟೂರ್ನಿಯಲ್ಲಿ ಬಲಿಷ್ಠ ಆಟಗಾರರು ಭಾಗವಹಿಸುತ್ತಿದ್ದಾರೆ. ಹೀಗಾಗಿ ಸ್ಪರ್ಧೆಯೂ ಕಠಿಣವಾಗಿರಲಿದೆ. ನಿಕಿ ಮತ್ತು ಅರ್ಜುನ್ ಪ್ರತಿಭಾನ್ವಿತ ಆಟಗಾರರು. ಹೀಗಾಗಿ ಅವರಿಗೆ ‘ವೈಲ್ಡ್ ಕಾರ್ಡ್’ ಅರ್ಹತೆ ನೀಡಿದ್ದೇವೆ’ ಎಂದು ಟೂರ್ನಿಯ ನಿರ್ದೇಶಕ ಸುನೀಲ್ ಯಜಮಾನ್ ಹೇಳಿದ್ದಾರೆ.
ಭಾರತದ ಪ್ರಜ್ಞೇಶ್ ಗುಣೇಶ್ವರನ್, ಶಶಿಕುಮಾರ್ ಮುಕುಂದ್, ಸುಮಿತ್ ನಗಾಲ್ ಮತ್ತು ರಾಮಕುಮಾರ್ ರಾಮನಾಥನ್ ಅವರೂ ಸಿಂಗಲ್ಸ್ ವಿಭಾಗದಲ್ಲಿ ಕಣದಲ್ಲಿದ್ದಾರೆ. ಇವರು ಮುಖ್ಯ ಸುತ್ತಿಗೆ ನೇರ ಅರ್ಹತೆ ಗಳಿಸಿದ್ದಾರೆ.