ಅಹಮದಾಬಾದ್: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಣ ಹಣಾಹಣಿ ಇಂದು ಮಧ್ಯಾಹ್ನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಪಂದ್ಯಕ್ಕೂ ಮೊದಲು ನಡೆದ ಸುದ್ದಿಗೋಷ್ಠಿಯಲ್ಲಿ, ಟೀಮ್ ಇಂಡಿಯಾದ ಸಂಯೋಜನೆ ಬಗ್ಗೆ ಗುಟ್ಟು ಬಿಟ್ಟು ಕೊಡದ ನಾಯಕ ರೋಹಿತ್ ಶರ್ಮಾ, ಅಗತ್ಯ ಬಿದ್ದಲ್ಲಿ ಮೂವರು ಸ್ಪಿನ್ನರ್ಗಳ ಕಾಂಬಿನೇಷನ್ನೊಂದಿಗೆ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಹಾಗೂ ಅಫ್ಗಾನಿಸ್ತಾನ ವಿರುದ್ಧ ಗೆಲುವಿನ ಹುಮ್ಮಸ್ಸಿನಲ್ಲಿರುವ ಭಾರತ, ಪಾಕಿಸ್ತಾನ ವಿರುದ್ಧವೂ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ.
ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡವು ಮೂವರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿದಿತ್ತು. ಚೆನ್ನೈನ ಸ್ಪಿನ್ ಸ್ನೇಹಿ ಪಿಚ್ನಲ್ಲಿ ಕುಲದೀಪ್ ಯಾದವ್, ರವೀಂದ್ರ ಜಡೇಜ ಹಾಗೂ ರವಿಚಂದ್ರನ್ ಅಶ್ವಿನ್ ಮೋಡಿ ಮಾಡಿದ್ದರು.
ಆದರೆ ದೆಹಲಿಯಲ್ಲಿ ಅಫ್ಗಾನಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ ಅಶ್ವಿನ್ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಆಯ್ಕೆಯಾಗಿದ್ದರು. ಈಗ ಪಾಕಿಸ್ತಾನ ವಿರುದ್ಧ ಮತ್ತೆ ಮೂವರು ಸ್ಪಿನ್ನರ್ಗಳನ್ನು ಆಡಿಸುತ್ತಾರೆಯೇ ಎಂಬುದು ಕುತೂಹಲವೆನಿಸಿದೆ.
ಪ್ರಮಾಣಿಕವಾಗಿ ಹೇಳಬೇಕಂದರೆ ನನಗೆ ಈ ಬಗ್ಗೆ ಗೊತ್ತಿಲ್ಲ. ಒಂದೆರಡು ಬದಲಾವಣೆಗಳನ್ನು ಅಗತ್ಯವಿದ್ದಲ್ಲಿ ಮಾಡುತ್ತೇವೆ. ಈ ಕುರಿತು ಮೊದಲೇ ಆಟಗಾರರಿಗೆ ತಿಳಿಸುತ್ತೇವೆ. ಹಾಗಾಗಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ರೋಹಿತ್ ತಿಳಿಸಿದ್ದಾರೆ.
ನಮ್ಮ ಪಾಲಿಗೆ ಈ ಪಂದ್ಯ ಹೊಸ ದಿನ ಹಾಗೂ ಹೊಸ ಸವಾಲಿನಿಂದ ಕೂಡಿರಲಿದೆ. ಅವೆಲ್ಲವನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದು ಹೇಳಿದ್ದಾರೆ.
ನನ್ನ ಆಟವನ್ನು ಅರ್ಥ ಮಾಡಿಕೊಂಡಿದ್ದೇನೆ. ತಂಡಕ್ಕಾಗಿ ಸಾಧ್ಯವಾದಷ್ಟು ಉತ್ತಮವಾಗಿ ಆಡಲು ಪ್ರಯತ್ನಿಸುತ್ತೇನೆ. ಓರ್ವ ಆಟಗಾರ ಹಾಗೂ ನಾಯಕನಾಗಿ ಏನು ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟತೆಯಿದೆ ಎಂದು ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ಮತ್ತೆ ಮುಖಾಮುಖಿಯಾಗುತ್ತಿದೆ. ಆದರೆ ಇದು ನಮ್ಮ ಪಾಲಿಗೆ ಮತ್ತೊಂದು ಪಂದ್ಯ, ಮತ್ತೊಂದು ಎದುರಾಳಿ ಮಾತ್ರವಾಗಿದೆ ಎಂದು ರೋಹಿತ್ ಹೇಳಿದ್ದಾರೆ.
ನಾನು ಈ ಕುರಿತು ಹಲವು ಸಲ ಹೇಳಿದ್ದೇನೆ. ಹಿಂದಿನ ಎರಡು ಪಂದ್ಯಗಳಂತೆಯೇ ಇದನ್ನು ಕೂಡ ಪರಿಗಣಿಸುತ್ತೇವೆ. ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಡೆಂಗಿ ಜ್ವರದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಭಾರತದ ಶುಭಮನ್ ಗಿಲ್ ಅವರು ಫಿಟ್ ಆಗಿದ್ದಾರೆ. ಪಾಕಿಸ್ತಾನ ಎದುರಿನ ಪಂದಕ್ಕೆ ಶೇ 99ರಷ್ಟು ಲಭ್ಯ ಇದ್ದಾರೆ ಎಂದು ರೋಹಿತ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.