ಬೆಂಗಳೂರು: ‘15 ವರ್ಷ ಹಳೆಯ ವಾಹನಗಳಿಗೆ ನಿಷೇಧ ಹೇರಲಾಗುವುದು’ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳಿದರು.
ನಗರದಲ್ಲಿ ಸಾರಿಗೆ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪದಲ್ಲಿ ಅವರು ಮಾತನಾಡಿದರು.
‘ಸಂಚಾರ ದಟ್ಟಣೆ ನಿಭಾಯಿಸುವ ನಿಟ್ಟಿನಲ್ಲಿ ಕೆಲವುವಾಹನಗಳನ್ನು ನಿಷೇಧಿಸಬೇಕಾಗಿದೆ. ನಗರ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ವಾರ್ಡ್ ಮಟ್ಟದಲ್ಲಿ ಜಾಗೃತಿ, ಅರಿವು ಮೂಡಿಸಲಾಗುವುದು’ ಎಂದರು.
‘ರಾಜ್ಯದಲ್ಲಿ ಜನಸಂಖ್ಯೆಯ ಅರ್ಧದಷ್ಟು ವಾಹನಗಳು ನೋಂದಣಿಯಾಗಿವೆ. ರಾಜಧಾನಿಯಲ್ಲಿ 1 ಕೋಟಿ ಜನಸಂಖ್ಯೆ ಇದೆ. ಸುಮಾರು ಅಷ್ಟೇ ಸಂಖ್ಯೆಯ ವಾಹನಗಳಿವೆ. ಇದರ ನಡುವೆ ಹೊರ ರಾಜ್ಯಗಳಿಂದಲೂ ಲಕ್ಷಾಂತರ ವಾಹನಗಳು ಬರುತ್ತಿವೆ’ ಎಂದರು.
ಶಾಸಕ ಉದಯ್ ಬಿ.ಗರುಡಾಚಾರ್ ಮಾತನಾಡಿ, ‘ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಕಡಿವಾಣ ಹಾಕಲು ಹದಿನೈದು ವರ್ಷ ಹಳೆಯ ವಾಹನ ನಿಷೇಧಿಸಬೇಕು’ ಎಂದರು.
ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ ಮಾತನಾಡಿ, ‘ಸುರಕ್ಷತಾ ನಿಯಮ ಪಾಲಿಸದ ಕಾರಣ ದೇಶದಲ್ಲಿ ಪ್ರತಿ ವರ್ಷ ಒಂದೂವರೆ ಲಕ್ಷಕ್ಕೂ ಅಧಿಕ ಜನ ಸಾಯುತ್ತಿದ್ದಾರೆ’ ಎಂದು ಹೇಳಿದರು.