ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ದಂತಚೋರರ ಬಂಧನ

ಹೊಗೇನಕಲ್‌ ಅರಣ್ಯದಿಂದ ತರಲಾಗಿದ್ದ ದಂತವೆಂಬ ಶಂಕೆ
Last Updated 8 ಫೆಬ್ರುವರಿ 2019, 19:09 IST
ಅಕ್ಷರ ಗಾತ್ರ

ಬೆಂಗಳೂರು: ಆನೆ ಕೊಂದು ಅದರ ದಂತಗಳನ್ನು ಕದ್ದುಕೊಂಡು ಬಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ತಮಿಳುನಾಡಿನ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ದಿಂಡಿಗಲ್ ಜಿಲ್ಲೆಯ ಪಳನಿಯ ಮುರಗಾನಂದಂ (35) ಹಾಗೂ ಥೇಣಿ ಜಿಲ್ಲೆಯ ಪುದೂರಿನ ಬಾಲು (60) ಬಂಧಿತರು.

ಅವರಿಂದ ಎರಡು ಆನೆ ದಂತಗಳನ್ನು ಜಪ್ತಿ ಮಾಡಲಾಗಿದೆ.‌ ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ತಮಿಳುನಾಡಿಗೆ ಹೋಗಿದೆ.‌ ಆನೆ ದಂತಗಳನ್ನು ಚೀಲದಲ್ಲಿ ಇಟ್ಟುಕೊಂಡು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಆರೋಪಿಗಳು ಫೆ. 6ರಂದು ಬೆಂಗಳೂರಿಗೆ ಬಂದಿದ್ದರು. ನಂತರ, ಎಚ್‌ಆರ್‌ಬಿಆರ್ ಲೇಔಟ್‌ನ 3ನೇ ಬ್ಲಾಕ್‌ನ ಸರ್ವೀಸ್ ರಸ್ತೆಯ ನೀರಿನ ಟ್ಯಾಂಕ್ ಬಳಿಗೆ ಬಿಎಂಟಿಸಿ ಬಸ್ಸಿನಲ್ಲಿಸಂಜೆ ಬಂದಿಳಿದು, ಗ್ರಾಹಕರಿಗಾಗಿ ಕಾಯುತ್ತ ನಿಂತಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಬಾಣಸವಾಡಿ ಠಾಣೆಯ ಇನ್‌ಸ್ಪೆಕ್ಟರ್ ಆರ್‌.ವಿರೂಪಾಕ್ಷ ಸ್ವಾಮಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಹೊಗೇನಕಲ್‌ ಅರಣ್ಯದಲ್ಲಿ ಆನೆ ಕೊಂದಿರುವ ಶಂಕೆ: ‘ಬಂಧಿತ ಆರೋಪಿಗಳು, ಏಜೆಂಟರೆಂದು ಹೇಳಿಕೊಳ್ಳುತ್ತಿದ್ದಾರೆ. ಪ್ರಮುಖ ಆರೋಪಿ ಕೊಟ್ಟಿದ್ದ ಆನೆದಂತಗಳನ್ನು ಕಮಿಷನ್ ಆಸೆಗಾಗಿ ಬೆಂಗಳೂರಿನಲ್ಲಿ ಮಾರಾಟ ಮಾಡಲು ಬಂದಿರುವುದಾಗಿ ಹೇಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ದಂತ ಮಾರಾಟ ಮಾಡಲು ಬಂದಿದ್ದರು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಬಾಣಸವಾಡಿ ಪೊಲೀಸರು ಹೇಳಿದರು.

‘ಹೊಗೇನಕಲ್‌ ಅರಣ್ಯದಲ್ಲಿ ಆನೆಯನ್ನು ಕೊಂದು ಅದರ ದಂತಗಳನ್ನು ಕದ್ದು ತಂದಿರುವ ಶಂಕೆ ಇದೆ. ದಂತವನ್ನು ಯಾರಿಗೆ ಮಾರಾಟ ಮಾಡಲು ಬಂದಿದ್ದರು ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ. ಪ್ರಮುಖ ಆರೋಪಿ ಸಿಕ್ಕ ಬಳಿಕ ನಿಖರ ಮಾಹಿತಿ ಸಿಗಬಹುದು’ ಎಂದರು.

‘ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT