ಬೆಂಗಳೂರು: ನಗರದಲ್ಲಿ ಅಂತರ್ಜಾತಿ ವಿವಾಹ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ನಾಲ್ಕು ತಿಂಗಳ ಅವಧಿಯಲ್ಲಿ 58 ಜೋಡಿಗಳು ಹಸೆಮಣೆ ಏರಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಹೆಚ್ಚು.ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಹೆಚ್ಚು ಅಂತರ್ಜಾತಿ ವಿವಾಹಗಳು ವರದಿಯಾಗಿವೆ. ಯಶವಂತಪುರ, ಗಾಂಧಿನಗರ, ಬಾಣಸವಾಡಿ, ನಾಗಸಂದ್ರ ಮತ್ತು ಬಿಳೇಕಹಳ್ಳಿಯಲ್ಲೂ ಅಂತರ್ಜಾತಿ ವಿವಾಹಗಳು ವರದಿಯಾಗಿರುವುದು ಸಮಾಜ ಕಲ್ಯಾಣ ಇಲಾಖೆಯ ಅಂಕಿ–ಅಂಶಗಳಿಂದ ತಿಳಿದುಬಂದಿದೆ.
ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸರ್ಕಾರ ದಲಿತ ಯುವತಿಯನ್ನು ಇತರ ಜಾತಿಯ ಯುವಕ ಮದುವೆಯಾದರೆ ₹3 ಲಕ್ಷ ಹಾಗೂ ದಲಿತ ಯುವಕನನ್ನು ಇತರ ಸಮುದಾಯದ ಯುವತಿ ವಿವಾಹವಾದರೆ ₹2 ಲಕ್ಷ ಪ್ರೋತ್ಸಾಹ ಧನ ನೀಡುತ್ತಿದೆ. ಹಣವನ್ನು ಎರಡು ಹಂತಗಳಲ್ಲಿ ದಂಪತಿಯ ಜಂಟಿ ಖಾತೆಗೆ ಜಮೆ ಮಾಡಲಾಗುತ್ತಿದೆ.
ಕಳೆದ ವರ್ಷ ನಗರದಲ್ಲಿ ಒಟ್ಟು 754 ಅಂತರ್ಜಾತಿ ವಿವಾಹಗಳಾಗಿದ್ದವು, 751 ಜನ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 392 ಜನಕ್ಕೆ ಮೊದಲ ಹಂತದ ಪ್ರೋತ್ಸಾಹ ಧನ ನೀಡಲಾಗಿದೆ.
‘ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ಅಂತರ್ಜಾತಿ ವಿವಾಹದ ಪ್ರೋತ್ಸಾಹ ಧನ ಯೋಜನೆ ಕುರಿತ ಕರ ಪತ್ರಗಳನ್ನು ಹಂಚಿದ್ದೇವೆ. ಪ್ರಚಾರದ ಎಲ್ಲ ಸಾಧ್ಯತೆಗಳನ್ನು ಬಳಸಿಕೊಂಡು ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದೇವೆ. ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ’ಎಂದು ಬೆಂಗಳೂರು ನಗರ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಲಕ್ಷ್ಮಣರೆಡ್ಡಿ ತಿಳಿಸಿದರು.
‘ತೆರೆಮರೆಯಲ್ಲಿ ನಡೆಯುವ ಕೆಲ ಅಂತರ್ಜಾತಿ ವಿವಾಹಗಳು ನೋಂದಣಿಯಾಗುವುದಿಲ್ಲ. ಹೀಗಾಗಿ, ಜಿಲ್ಲೆಯಲ್ಲಿ ಒಟ್ಟಾರೆ ಸಂಖ್ಯೆ ಮತ್ತಷ್ಟು ಹೆಚ್ಚಿರುವ ಸಾಧ್ಯತೆಯೂ ಇದೆ’ ಎಂದು ಅವರು ಹೇಳಿದರು.
ಅಂಕಿ–ಅಂಶ ಅಂತರ್ಜಾತಿ ವಿವಾಹ ವಿವರ ವರ್ಷ; ಜೋಡಿ 2019–20: 56 2018–19: 754 2017–18: 280 2016–17: 36
ಒಳ ಪಂಗಡ ವಿವಾಹಗಳು ವರ್ಷ; ಜೋಡಿ 2019–20: 3 2018–19: 20 2017–18: 0
ಪ್ರೋತ್ಸಾಹ ಧನ ವಿವರ (ಕೋಟಿಗಳಲ್ಲಿ) ₹9.93 ಕೋಟಿ:ಬಿಡುಗಡೆಯಾದ ಹಣ ₹9.91 ಕೋಟಿ:ನೀಡಿದ ಒಟ್ಟು ಪ್ರೋತ್ಸಾಹ ಧನ
**
ಹಣದ ಬದಲು ಉದ್ಯೋಗಕ್ಕೆ ವ್ಯವಸ್ಥೆ ಮಾಡಬೇಕು. ಮನೆಯನ್ನಾದರೂ ಕಟ್ಟಿಸಿಕೊಟ್ಟರೆ, ಮನೆಯಿಂದ ಹೊರಬಿದ್ದ ನಮಗೆ ವಾಸಕ್ಕೆ ಅನುಕೂಲವಾಗುತ್ತದೆ. –ಎಂ.ಕಿರಣ್– ಸಾವಿತ್ರಿ,ಅಟ್ಟೂರು, ಯಲಹಂಕ