ಬೆಂಗಳೂರು: ಗಿರಿನಗರದ ವಿವೇಕಾ ನಂದ ಉದ್ಯಾನದ ಬಳಿಯಿರುವ ವಾಲಿಬಾಲ್ ಮೈದಾನದಲ್ಲಿ ಪೊಲೀಸ್ ಠಾಣೆ ನಿರ್ಮಾಣ ವಿರೋಧಿಸಿ ಅಲ್ಲಿನ ನಿವಾಸಿಗಳು ಮತ್ತು ಮಕ್ಕಳು ಶುಕ್ರವಾರ ಪ್ರತಿಭಟನೆ ಮಾಡಿದರು.
‘35 ವರ್ಷಗಳಿಂದ ಈ ಮೈದಾನವನ್ನು ಉಪಯೋಗಿಸುತ್ತಿದ್ದೇವೆ. ಮಕ್ಕಳು ಆಟವಾಡಲು ಇರುವುದೊಂದೇ ಜಾಗ. ಇದನ್ನೂ ನಾಶ ಮಾಡಿದರೆ ಮಕ್ಕಳಿಗೆ ಕ್ರೀಡಾಂಗಣ ಇಲ್ಲದಂತಾಗುತ್ತದೆ. ನಮಗೂ ಠಾಣೆಯ ಅಗತ್ಯವಿದೆ. ಆದರೆ, ಮೈದಾನದ ಜಾಗವನ್ನು ಬಿಟ್ಟು ಬೇರೆ ಎಲ್ಲಾದರೂ ನಿರ್ಮಿಸಿ’ ಎಂದು ಸ್ಥಳೀಯರು ಒತ್ತಾಯಿಸಿದರು.
‘ಮಾದರಿ ನೀತಿ ಸಂಹಿತೆಯೂ ಜಾರಿಯಲ್ಲಿದೆ. ಇದು ಗೊತ್ತಿದ್ದರೂ ಅಧಿಕಾರಿಗಳು ಉಲ್ಲಂಘನೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಪೊಲೀಸ್ ಕಮಿಷನರ್ ಟಿ.ಸುನಿಲ್ ಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಅವರು ತಿಳಿಸಿದ್ದಾರೆ. ಬೇರೆ ಜಾಗದಲ್ಲಿ ಠಾಣೆ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ಶಾಸಕ ಎಲ್.ಎ. ರವಿ ಸುಬ್ರಹ್ಮಣ್ಯ ಅವರು ಹೇಳಿದರು.