ಕೆ.ಆರ್.ಪುರ: ಸರ್ವಜ್ಞನಗರ ಕ್ಷೇತ್ರದ ಕಮ್ಮನಹಳ್ಳಿ ವಾರ್ಡ್ನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ ಎಂದು ದೂರಿ ಸಾರ್ವಜನಿಕರು ಕಲ್ಯಾಣನಗರದ ಜಲಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
‘ವಾರ್ಡಿನಲ್ಲಿ 60 ಸಾವಿರಕ್ಕೂ ಹೆಚ್ಚು ಮಂದಿ ವಾಸ ಮಾಡುತ್ತಿದ್ದಾರೆ. ಸಕಾಲಕ್ಕೆ ಕಾವೇರಿ ನೀರು ಪೂರೈಕೆ ಆಗುತ್ತಿಲ್ಲ. ವಾರದಲ್ಲಿ ಒಂದು ದಿನ ನಲ್ಲಿಯಲ್ಲಿ ನೀರು ಬರುತ್ತದೆ. ಅದು ಸಹ ಅರ್ಧ ಗಂಟೆ ಮಾತ್ರ. ರಾತ್ರಿ ಹನ್ನೆರಡು ಗಂಟೆಯ ನಂತರ ನೀರು ಬಿಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ’ ಎಂದು ಪ್ರತಿಭಟನಾಕಾರರು ದೂರಿದರು.
‘ಕನಿಷ್ಠ ಪಕ್ಷ ವಾರದಲ್ಲಿ ಮೂರು ಬಾರಿ ಸಲವಾದರೂ ಹಗಲು ಹೊತ್ತಿನಲ್ಲಿ ನೀರು ಹರಿಸಬೇಕು’ ಎಂದು ಅವರು ಒತ್ತಾಯಿಸಿದರು.
ಕಾರ್ಯನಿರ್ವಾಹಕ ಎಂಜಿನಿಯರ್ ಚಲಪತಿ ಪ್ರತಿಕ್ರಿಯಿಸಿ, ‘ವಾರ್ಡಿನಲ್ಲಿ ಹಲವು ಕಡೆ ಕೊಳವೆ ಬಾವಿಗಳು ಬತ್ತಿಹೊಗಿರುವುದರಿಂದ ಸಮಸ್ಯೆ ಹೆಚ್ಚಾಗಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ’ ಎಂದು ಅವರು ಹೇಳಿದರು.