ಜೈಪುರ: ರಾಜಸ್ತಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಪತನಗೊಳಿಸಲು ಸಂಚು ರೂಪಿಸಿದ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಪಕ್ಷದ ಮುಖಂಡ ಅಜಯ್ ಮಕೇನ್, ’ಕಾಂಗ್ರೆಸ್ ಶಾಸಕ ಭನ್ವರ್ಲಾಲ್ ಶರ್ಮಾ, ಶೇಖಾವತ್ ಹಾಗೂ ಸಂಜಯ್ ಜೈನ್ ನಡುವೆ ನಡೆದ ಸಂಭಾಷಣೆಯ ಆಡಿಯೊ ಟೇಪ್ಗಳಿಗೆ ಸಂಬಂಧಿಸಿದಂತೆ ಎಸಿಬಿಯು ಪ್ರಕರಣ ದಾಖಲಿಸಿದೆ‘ ಎಂದು ಹೇಳಿದ್ದಾರೆ.
ಆಡಿಯೊ ತುಣುಕಿನಲ್ಲಿರುವುದು ತಮ್ಮ ಧ್ವನಿಯಲ್ಲ ಎಂದುಗಜೇಂದ್ರಸಿಂಗ್ ಖೇಖಾವತ್ ಸ್ಪಷ್ಟಪಡಿಸಿದ್ದಾರೆ. ಆದರೆ, ಅವರ ಧ್ವನಿಯಲ್ಲದೇ ಇದ್ದರೆ ಧ್ವನಿ ಮಾದರಿ ನೀಡಲು ಅವರು ಏಕೆ ಹಿಂಜರಿಯುತ್ತಿದ್ದಾರೆ ಎಂದು ಮಕೇನ್ ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವರಾಗಿ ಮುಂದುವರಿಯಲು ಖೇಖಾವತ್ಗೆ ನೈತಿಕತೆಯಿಲ್ಲ. ತನಿಖೆಯಲ್ಲಿ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಅವರು ರಾಜೀನಾಮೆ ನೀಡಬೇಕು. ಹರಿಯಾಣ ಮತ್ತು ದೆಹಲಿ ಪೊಲೀಸರು ಬಂಡಾಯ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ಒದಗಿಸುತ್ತಿದ್ದಾರೆ ಎಂದು ದೂರಿದ್ದಾರೆ.