ನವದೆಹಲಿ:ಛತರ್ಪುರದ ರಾಧಾ ಸ್ವಾಮಿ ಸತ್ಸಂಗ್ ಬಿಯಾಸ್ನಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿದೊಡ್ಡ ಆರೈಕೆ ಕೇಂದ್ರ ‘ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರ’ವನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರು ಭಾನುವಾರ ಉದ್ಘಾಟಿಸಿದರು.
ಈ ಆರೈಕೆ ಕೇಂದ್ರ ಒಟ್ಟು 10,000 ಹಾಸಿಗೆಗಳನ್ನು ಒಳಗೊಂಡಿದ್ದು, ಲಕ್ಷಣ ರಹಿತ ಕೊರೊನಾ ಸೋಂಕಿತರಿಗೆ ಇಲ್ಲಿ ಚಿಕಿತ್ಸೆಯನ್ನು ನೀಡಲಾಗುವುದು. ಮನೆಯಲ್ಲಿ ಪ್ರತ್ಯೇಕ ವಾಸ ಮಾಡಲು ಸಾಧ್ಯವಾಗದಂತಹ ಲಕ್ಷಣ ರಹಿತ ಸೋಂಕಿತರಿಗೂ ಇಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.
ಈ ಆರೈಕೆ ಕೇಂದ್ರವು 1,700 ಅಡಿ ಉದ್ದ, 700 ಅಡಿ ಅಗಲ - ಸರಿಸುಮಾರು 20 ಫುಟ್ಬಾಲ್ ಮೈದಾನಗಳಷ್ಟು ವಿಸ್ತಾರವಾಗಿದೆ. ಅಲ್ಲದೇ ಒಟ್ಟು 200 ಅಂಕಣಗಳನ್ನು ಒಳಗೊಂಡಿದ್ದು, ಇದರಲ್ಲಿ ತಲಾ 50 ಹಾಸಿಗೆಗಳನ್ನು ಹಾಕಲಾಗಿದೆ.
ಇನ್ನು ದೆಹಲಿ ಸರ್ಕಾರವು ಆಡಳಿತಾತ್ಮಕ ಬೆಂಬಲವನ್ನು ನೀಡಿದರೆ, ಇಂಡೊ–ಟಿಬೆಟನ್ ಗಡಿ ಪೊಲೀಸ್ ಪಡೆ (ಐಟಿಬಿಪಿ) ಆರೈಕೆ ಕೇಂದ್ರದ ನೋಡಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸಲಿದೆ. ಕೇಂದ್ರದ ಕಾರ್ಯಗಳಲ್ಲಿ ರಾಧಾ ಸ್ವಾಮಿ ಸತ್ಸಂಗ್ನ ಸ್ವಯಂಸೇವಕರು ಕೂಡ ಕೈ ಜೋಡಿಸಲಿದ್ದಾರೆ.