ಪಟಣ:ಬಿಹಾರದಲ್ಲಿ ಶುಕ್ರವಾರ ಅಬ್ಬರಿಸಿದ ಸಿಡಿಲಿಗೆ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಜೂನ್ 25ರಂದು ರಾಜ್ಯದ ಎಂಟು ಜಿಲ್ಲೆಗಳಲ್ಲಿ ಇದೇ ರೀತಿಯ ಘಟನೆ ಸಂಭವಿಸಿ ಸುಮಾರು 83 ಜನರು ಮೃತಪಟ್ಟಿದ್ದರು. ಗುರುವಾರ ಮತ್ತೆ ಬಂದೆರಗಿದ ಸಿಡಿಲಿಗೆ 26 ಮಂದಿ ಸಾವಿಗೀಡಾಗಿದ್ದರ ಬಗ್ಗೆ ವರದಿಯಾಗಿತ್ತು. ಇದರ ಬೆನ್ನಲ್ಲೇ ಶುಕ್ರವಾರ ಮತ್ತೆ ಅಬ್ಬರಿಸಿದ ಸಿಡಿಲಿಗೆ ಕನಿಷ್ಠ ಎಂಟು ಜನರು ಮರಣ ಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರದ ಐದು ಜಿಲ್ಲೆಗಳಲ್ಲಿ ಈ ದುರಂತ ಸಂಭವಿಸಿದ್ದು, ಸಮಸ್ತಿಪುರ ಜಿಲ್ಲೆಯಲ್ಲಿ ಮೂವರು, ಲಖಿಸರೈನಲ್ಲಿ ಇಬ್ಬರು, ಗಯಾ, ಬಂಕಾ ಮತ್ತು ಜಮುಯಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ವಿಭಾಗದ ಮೂಲಗಳು ತಿಳಿಸಿವೆ.
ಸಿಡಿಲಿನಿಂದ ಮೃತಪಟ್ಟವರಕುಟುಂಬಗಳಿಗೆ ತಲಾ ₹ 4 ಲಕ್ಷ ಪರಿಹಾರ ನೀಡುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ.
ಅಸ್ಸಾಂನಲ್ಲಿ ಮುಂದುವರೆದ ಪ್ರವಾಹ, ಸಂಕಷ್ಟದಲ್ಲಿ 13.3 ಲಕ್ಷ ಜನ
ಅಸ್ಸಾಂನ ಕೆಲವು ಜಿಲ್ಲೆಗಳಲ್ಲಿಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಶುಕ್ರವಾರ ಪ್ರವಾಹಕ್ಕೆ ಸಿಲುಕಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದರ ಬಗ್ಗೆ ವರದಿಯಾಗಿದೆ.
ಅಸ್ಸಾಂನ 20 ಜಿಲ್ಲೆಗಳಲ್ಲಿ ಸುಮಾರು 13.3 ಲಕ್ಷ ಜನರು ಈ ಪ್ರವಾಹದಿಂದ ಬಾಧಿತರಾಗಿದ್ದಾರೆ.
ನೆರೆಯ ಹಿನ್ನೆಲೆಯಲ್ಲಿ ಸೂರು ಕಳೆದುಕೊಂಡ ಸುಮಾರು 12,597 ಜನರಿಗೆ 163 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ.