ಮುಂಬೈ: ಹಾಲು ಖರೀದಿ ದರ ಹೆಚ್ಚಳಕ್ಕೆ ಆಗ್ರಹಿಸಿ ಇದೇ 1ರಿಂದ ಮಹಾರಾಷ್ಟ್ರದ ಹಾಲು ಉತ್ಪಾದಕರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ.
ಅಖಿಲ ಭಾರತ ಕಿಸಾನ್ ಸಭಾ, ಸ್ವಾಭಿಮಾನಿ ಶೆತ್ಕಾರಿ ಸಂಘಟನೆ, ಧೂದ ಉತ್ಪಾದಕ ಶೆತ್ಕಾರಿ ಸಂಘರ್ಷ ಸಮಿತಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.
ಜುಲೈ ತಿಂಗಳಲ್ಲಿ ರಾಜ್ಯದ ವಿವಿಧೆಡೆ ಉತ್ಪಾದಕರು ಪ್ರತಿಭಟನೆ ನಡೆಸಿದರೂ ರಾಜ್ಯ ಸರ್ಕಾರ ಉತ್ಪಾದಕರ ಬೇಡಿಕೆಗೆ ಸ್ಪಂದಿಸಿಲ್ಲ.ಡೇರಿಗಳು ಲೀಟರ್ ಹಾಲಿಗೆ ₹ 16–18 ಬದಲಾಗಿ ₹ 30 ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
‘ಗ್ರಾಹಕರಿಗೆ ಲೀಟರ್ ಹಾಲಿಗೆ ₹ 48ಗೆ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಸರ್ಕಾರ ಉತ್ಪಾದಕರಿಗೆ ₹ 10 ಸಬ್ಸಿಡಿ ನೀಡಬೇಕು’ ಎಂದು ಎಐಕೆಎಸ್ ಅಧ್ಯಕ್ಷ ಅಶೋಕ್ ದಾವಳೆಒತ್ತಾಯಿಸಿದ್ದಾರೆ.
‘10 ಲಕ್ಷ ಟನ್ ಹಾಲಿನ ಪೌಡರ್ ಆಮದು ಮಾಡಿಕೊಳ್ಳಲು ಜೂನ್ 26ರಂದು ಹೊರಡಿಸಿರುವ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು. ಔಷಧಗಳ ರಫ್ತಿಗೆ ಪ್ರತಿಯಾಗಿ ಅಮೆರಿಕದಿಂದ ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಇದನ್ನು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.