ನವದೆಹಲಿ: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸದ್ಯ ಜಾರಿಯಲ್ಲಿರುವ ಮಧ್ಯಾಹ್ನದ ಬಿಸಿಯೂಟದ ಜತೆ ಬೆಳಗ್ಗೆ ಉಪಾಹಾರವನ್ನು ಸಹ ಒದಗಿಸಬೇಕು ಎಂದು ನೂತನ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.
ಪೌಷ್ಟಿಕ ಆಹಾರವುಳ್ಳ ಉಪಾಹಾರ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಉತ್ತಮ. ಅಪೌಷ್ಟಿಕತೆಯಿಂದ ಬಳಲುವವರು ಅಥವಾ ಅನಾರೋಗ್ಯದಿಂದ ಇದ್ದರೆ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಹೀಗಾಗಿ, ಪೌಷ್ಟಿಕತೆ ಮತ್ತು ಆರೋಗ್ಯದ ಬಗ್ಗೆ ಗಮನಹರಿಸಬೇಕಾಗಿದೆ ಎಂದು ನೀತಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಳಗಿನ ಸಮಯದಲ್ಲಿ ಪೌಷ್ಟಿಕಾಂಶಗಳಿರುವ ಉಪಾಹಾರ ಸೇವಿಸುವುದರಿಂದ ಕಲಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಬಹುದು ಎಂದು ಸಂಶೋಧನೆಗಳು ತಿಳಿಸಿವೆ. ಮಕ್ಕಳು ಬೆಳಗಿನ ಜಾವ ಶಾಲೆಯಲ್ಲಿ ಹಸಿವಿನಿಂದ ಇದ್ದರೆ ಕಲಿಕೆಯಲ್ಲಿ ಆಸಕ್ತಿ ತೋರುವುದಿಲ್ಲ. ಹೀಗಾಗಿ, ಈ ಯೋಜನೆ ಜಾರಿಗೊಳಿಸಬಹುದು ಎಂದು ತಿಳಿಸಿದೆ.
ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಲು ಅತ್ಯುತ್ತಮ ತರಬೇತಿ ಪಡೆದ ಸಾಮಾಜಿಕ ಕಾರ್ಯಕರ್ತರು, ಸಮಾಲೋಚಕರು ಮತ್ತು ಸಮುದಾಯದಲ್ಲಿ ಕ್ರಿಯಾಶೀಲವಾಗಿ ಭಾಗಿಯಾದವರನ್ನು ಶಾಲೆಯ ಆಡಳಿತ ವ್ಯವಸ್ಥೆಯಲ್ಲಿ ಸೇರಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ಬಿಸಿಯೂಟ ಒದಗಿಸಲು ಸಾಧ್ಯವಿಲ್ಲದ ಸ್ಥಳಗಳಲ್ಲಿ ಸಾದಾ ಆಹಾರ ಒದಗಿಸಬಹುದು. ಅದರೆ, ಪೌಷ್ಟಿಕಾಂಶಗಳಿಂದ ಕೂಡಿರಬೇಕು. ಬೆಲ್ಲದ ಜತೆ ಶೇಂಗಾ ಹಾಗೂ ಸ್ಥಳೀಯ ಹಣ್ಣುಗಳನ್ನು ಒದಗಿಸಬೇಕು ಎಂದು ಪ್ರಸ್ತಾಪಿಸಲಾಗಿದೆ.
ಕೇಂದ್ರ ಸಚಿವ ಸಂಪುಟ ಹೊಸ ಶಿಕ್ಷಣ ನೀತಿಗೆ ಕಳೆದ ವಾರ ಅನುಮೋದನೆ ನೀಡಿತ್ತು.