ನವದೆಹಲಿ: ತೂತ್ತುಕುಡಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ತಂದೆ–ಮಗ ಸಾವನ್ನಪ್ಪಿದ ಪ್ರಕರಣ ಕುರಿತು ತನಿಖೆಯನ್ನು ಆರಂಭಿಸಿರುವ ಸಿಬಿಐ, ಎರಡು ಎಫ್ಐಆರ್ ದಾಖಲಿಸಿದೆ.
‘ತನಿಖೆ ನಡೆಸುವ ಸಲುವಾಗಿ ತಂಡವೊಂದನ್ನು ತಮಿಳುನಾಡಿಗೆ ಕಳುಹಿಸಿಕೊಡಲಾಗಿದೆ. ಈಗಾಗಲೇ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಅವರನ್ನು ಈ ತಂಡವು ವಶಕ್ಕೆ ಪಡೆಯಲಿದೆ’ ಎಂದು ಸಿಬಿಐ ವಕ್ತಾರ ಆರ್.ಕೆ.ಗೌರ್ ತಿಳಿಸಿದರು.
ಪಿ.ಜಯರಾಜ್ ಹಾಗೂ ಮಗ ಬೆನಿಕ್ಸ್ ಅವರು ಲಾಕ್ಡೌನ್ ಅವಧಿ ಮೀರಿಯೂ ತಮ್ಮ ಮೊಬೈಲ್ ಅಂಗಡಿ ತೆರೆದಿದ್ದರು ಎಂಬ ಕಾರಣವೊಡ್ಡಿ ಇಬ್ಬರನ್ನು ಪೊಲೀಸರು ಜೂನ್ 19ರಂದು ಬಂಧಿಸಿದ್ದರು. ಅವರು ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಜೂನ್ 22ರಂದು ಮೃತಪಟ್ಟಿದ್ದರು.