ಲಾಹೋರ್: ಉಗ್ರರಿಗೆ ಹಣಕಾಸಿನ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ವಿರುದ್ಧದ ವಿಚಾರಣೆ ಶುಕ್ರವಾರ ಇಲ್ಲಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ(ಎಟಿಸಿ) ಆರಂಭಗೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸ್ನ ಭಯೋತ್ಪಾದನಾ ನಿಗ್ರಹ ದಳವು ಹಾಜರುಪಡಿಸಿದ ವ್ಯಕ್ತಿಯೊಬ್ಬರು ಈತನ ವಿರುದ್ಧ ಸಾಕ್ಷಿ ನುಡಿದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಡಿಸೆಂಬರ್ 11ರಂದು ಸಯೀದ್ ಮತ್ತು ಆತನ ಸಹಚರರಾದ ಹಫೀಜ್ ಅಬ್ದುಲ್ ಸಲಾಂ ಬಿನ್ ಮುಹಮ್ಮದ್, ಮುಹಮ್ಮದ್ ಅಶ್ರಫ್ ಮತ್ತು ಜಾಫರ್ ಇಕ್ಬಾಲ್ ವಿರುದ್ಧ ದೋಷಾರೋಪಣೆ ನಿಗದಿ ಮಾಡಿತ್ತು.
ಹಫೀಜ್ ಹಾಗೂ ಆತನ ಸಹಚರರನ್ನು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆ ತರಲಾಗಿತ್ತು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದ ಪರಿಣಾಮ ಪಾಕಿಸ್ತಾನವು ಹಫೀಜ್ ವಿರುದ್ಧ ಕ್ರಮಕ್ಕೆ ಮುಂದಾಗಿದೆ.