ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಕುಗ್ರಾಮದ ಚಿಣ್ಣರಿಗೆ ‘ಟೆಲಿ’ ಶಾಲೆ!

ಸಿಗ್ನಲ್ ಕೊರತೆಯ ಜೊಯಿಡಾದ ಗ್ರಾಮದಲ್ಲಿ ವಿಶಿಷ್ಟ ‘ಆನ್‌ಲೈನ್ ತರಗತಿ’
Last Updated 15 ಜುಲೈ 2020, 19:30 IST
ಅಕ್ಷರ ಗಾತ್ರ

ಕಾರವಾರ: ದಟ್ಟಕಾಡಿನ ನಡುವಿನ ಈ ಊರಿನಲ್ಲಿ ನಿತ್ಯವೂ ‘ಮೊಬೈಲ್ ಫೋನ್‌’ ಇಂಗ್ಲಿಷ್ ತರಗತಿ ನಡೆಯುತ್ತದೆ. 500 ಕಿಲೋ ಮೀಟರ್‌ಗೂ ಅಧಿಕ ದೂರದ ನಗರದಲ್ಲಿರುವ ಶಿಕ್ಷಕಿಯ ಧ್ವನಿಗೆ ಮಕ್ಕಳು ಕಿವಿಯಾಗುತ್ತಾರೆ, ಸಂವಹನ ನಡೆಸುತ್ತಾರೆ. ಆದರೆ, ಶಿಕ್ಷಕಿ ಮಾತ್ರ ‘ಅದೃಶ್ಯ’ವಾಗಿಯೇ ಇರುತ್ತಾರೆ!

ಈ ರೀತಿಯ ತರಗತಿ ನಡೆಯುತ್ತಿರುವುದುಜೊಯಿಡಾ ತಾಲ್ಲೂಕಿನ ಡೇರಿಯಾ ಎಂಬ ಕುಗ್ರಾಮದಲ್ಲಿ. ಇಲ್ಲಿನ ಬುಡಕಟ್ಟು ಜನಾಂಗದ 10 ವಿದ್ಯಾರ್ಥಿಗಳಿಗೆ ಮೈಸೂರಿನಒಂಟಿಕೊಪ್ಪಲು ನಿವಾಸಿ ಡಾ.ಆರ್.ಪೂರ್ಣಿಮಾ, ನಿತ್ಯವೂ ಮೊಬೈಲ್ ಫೋನ್ ಕರೆಯ ಮೂಲಕ ಇಂಗ್ಲಿಷ್ ಭಾಷೆ, ಮಗ್ಗಿಹಾಗೂ ಸಸ್ಯಶಾಸ್ತ್ರದ ಬಗ್ಗೆ ಬೋಧಿಸುತ್ತಿದ್ದಾರೆ. ನಾಲ್ಕನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ತಾಲ್ಲೂಕು ಕೇಂದ್ರದಿಂದ 12 ಕಿಲೋ ಮೀಟರ್ ದೂರದ ಈ ಗ್ರಾಮದಲ್ಲಿ ಒಂದೆರಡು ಮನೆಗಳ ಬಳಿ ಮಾತ್ರಮೊಬೈಲ್ಸಿಗ್ನಲ್ ಸಿಗುತ್ತದೆ. ಅದೂ ಒಂದೆರಡು ‘ಕಡ್ಡಿ’ಗಳಿಗೆ ಸೀಮಿತವಾಗಿರುತ್ತದೆ. ಇಲ್ಲಿ ಇಂಟರ್‌ನೆಟ್ ಸಂಪರ್ಕವಂತೂ ದೂರದ ಮಾತು. ಹಾಗಾಗಿ ಆನ್‌ಲೈನ್ ತರಗತಿ ಹಮ್ಮಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿತ ಪೂರ್ಣಿಮಾ, ಮೊಬೈಲ್ ಫೋನ್ ಮೂಲಕವೇ ಜ್ಞಾನಧಾರೆ ಎರೆಯುತ್ತಿದ್ದಾರೆ.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಆಗಿರುವ ಅವರ ಹುಮ್ಮಸ್ಸಿಗೆ, ಜೊಯಿಡಾದ ಕುಣಬಿ ಸಮಾಜದ ಅಧ್ಯಕ್ಷ ಡಾ.ಜಯಾನಂದ ಡೇರೇಕರ್ ಜೊತೆಯಾದರು. ಒಂದು ಮೊಬೈಲ್ ಫೋನ್ ಹಾಗೂ ಬ್ಲೂಟೂಥ್ಸ್ಪೀಕರ್ಖರೀದಿಸಿ ತಂದರು. ಸಿಗ್ನಲ್ ಸಿಗುವ ಮನೆಯೊಂದರ ಕಿಟಕಿಯಲ್ಲಿಟ್ಟು ಬ್ಲೂಟೂಥ್ ಮೂಲಕ ಸ್ಪೀಕರ್‌ಗೆ ಸಂಪರ್ಕ ನೀಡಿ ಧ್ವನಿವರ್ಧಿಸಿದರು. ಈ ರೀತಿ ಸುಮಾರು ಒಂದು ತಿಂಗಳಿನಿಂದ ನಿತ್ಯವೂ ಸಂಜೆ 4.30ರಿಂದ ಒಂದು ತಾಸು ತರಗತಿ ನಡೆಯುತ್ತಿದೆ.

‘ಈ ವರ್ಷ ಜೊಯಿಡಾದಲ್ಲಿಒಂದು ತಿಂಗಳಿದ್ದು ತರಗತಿ ಹಮ್ಮಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೆ.ಆದರೆ, ಲಾಕ್‌ಡೌನ್ ಕಾರಣದಿಂದ ಸಾಧ್ಯವಾಗಲಿಲ್ಲ. ಈಗ ಮಕ್ಕಳು ಈ ತರಗತಿಗೆಚೆನ್ನಾಗಿ ಸ್ಪಂದಿಸುತ್ತಿರುವುದು ಖುಷಿ ತಂದಿದೆ’ ಎಂದು ಆರ್.ಪೂರ್ಣಿಮಾ ಹೇಳುತ್ತಾರೆ.

‘ನಾನುಜಯಾನಂದ ಅವರಿಗೆ ಇ–ಮೇಲ್ ಮಾಡಿದ್ದ ಪಠ್ಯದ ಒಂದು ಪ್ರತಿಯನ್ನು ಮುದ್ರಿಸಿಮಕ್ಕಳಿಗೆ ನೀಡಲಾಗಿದೆ. ತರಗತಿಯಲ್ಲಿ ಅದನ್ನು ನೋಡಿಕೊಂಡು ಮಕ್ಕಳು ಪುನರುಚ್ಚರಿಸುತ್ತಾರೆ. ಅನುಮಾನಗಳಿದ್ದರೆ ಕೇಳಿ ಬಗೆಹರಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಅವರು.

ನಾಟಕದ ಮೂಲಕ ಕಲಿಕೆ:‘ನಾನು ರಂಗಕರ್ಮಿಯೂ ಆಗಿದ್ದು,ನಾಟಕಗಳ ಮೂಲಕವೂ ಇಂಗ್ಲಿಷ್ ವ್ಯಾಕರಣವನ್ನು ಕಲಿಸುತ್ತಿದ್ದೇನೆ. ಸಂಭಾಷಣೆಗಳನ್ನು ಹೇಳಿಸಿ ಅದರಲ್ಲಿ ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲದಲ್ಲಿ ವಾಕ್ಯ ರಚಿಸುವುದನ್ನುಮನವರಿಕೆ ಮಾಡಿಸುತ್ತಿದ್ದೇನೆ. ಇದು ಮಕ್ಕಳ ಪರಿಣಾಮಕಾರಿ ಕಲಿಕೆಗೆ ಸಹಕಾರಿಯಾಗಿದೆ. ಚಿಲ್ಡ್ರನ್ಸ್ ಲಿಟರರಿ ಕ್ಲಬ್ ಮೂಲಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಉಚಿತವಾಗಿ ಆಯೋಜಿಸುತ್ತಿದ್ದೇನೆ’ಎನ್ನುತ್ತಾರೆ ಆರ್.ಪೂರ್ಣಿಮಾ.

‘ಪೂರ್ಣಿಮಾ ಅವರು ಕಳೆದ ವರ್ಷ ಜೊಯಿಡಾಕ್ಕೆ ಬಂದಿದ್ದಾಗ ಇಂಗ್ಲಿಷ್‌ನ ಮೂಲ ಪಾಠವನ್ನು ಮಕ್ಕಳಿಗೆ ಬೋಧಿಸಿದ್ದರು. ಅದರ ಮುಂದುವರಿದ ಭಾಗವನ್ನು ಈ ವರ್ಷ ಹೇಳಿಕೊಡುತ್ತಿದ್ದಾರೆ’ ಎಂದು ಜಯಾನಂದ ಡೇರೇಕರ್ಸಂತಸ ವ್ಯಕ್ತಪಡಿಸುತ್ತಾರೆ.

***

ಲಾಕ್‌ಡೌನ್‌ನೆಪದಲ್ಲಿ ಹಳ್ಳಿಯ ಮಕ್ಕಳ ಕಲಿಕೆಯೂ ನಿಲ್ಲಬಾರದು. ಪೂರ್ಣಿಮಾ ಅವರಂಥ ನಿವೃತ್ತಇಂಗ್ಲಿಷ್ ಪ್ರೊಫೆಸರ್ ಮೂಲಕ ಮಕ್ಕಳಿಗೆ ಶಿಕ್ಷಣ ಸಿಗುತ್ತಿರುವುದು ಅದೃಷ್ಟ.

- ಡಾ.ಜಯಾನಂದ ಡೇರೇಕರ್,ಜೊಯಿಡಾದ ಕುಣಬಿ ಸಮಾಜದ ಅಧ್ಯಕ್ಷ

***

ಹಳ್ಳಿಯ ಮಕ್ಕಳೂ ಇಂಗ್ಲಿಷ್ ಭಾಷೆಯನ್ನು ಕಲಿಯಬೇಕು. ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಂಡಾಗ ಅವರಿಗೆ ಕೀಳರಿಮೆ ಕಾಡಬಾರದು ಎಂಬುದು ನನ್ನ ಆಶಯ.

- ಡಾ.ಆರ್.ಪೂರ್ಣಿಮಾ, ನಿವೃತ್ತ ಪ್ರೊಫೆಸರ್

***

ಶಿಕ್ಷಕರು ಎದುರು ಇಲ್ಲದಿದ್ದರೂ ಮೊಬೈಲ್ ಫೋನ್ ಮೂಲಕ ಇಂಗ್ಲಿಷ್ ಕಲಿಕೆ ಹೊಸ ಅನುಭವ ನೀಡುತ್ತಿದೆ. ಶಾಲಾ ತರಗತಿಯಲ್ಲೂ ಇದು ಅನುಕೂಲವಾಗಲಿದೆ.

- ನೇಹಾ ಡೇರೇಕರ್,9ನೇ ತರಗತಿ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT