ಗುವಾಹಟಿ: ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ಆಯಿಲ್ ಇಂಡಿಯಾ ಲಿಮಿಟೆಡ್ಗೆ ಸೇರಿದ ಅನಿಲ ಬಾವಿಯಲ್ಲಿ ಸ್ಫೋಟ ಸಂಭವಿಸಲು ಕಾರಣವಾದ ಅಂಶಗಳನ್ನು ಪತ್ತೆಹಚ್ಚಲು ಉನ್ನತಮಟ್ಟದ ತನಿಖೆಗೆ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್ ಆದೇಶಿಸಿದ್ದಾರೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಣಿಂದರ್ ಸಿಂಗ್ ಅವರು ತನಿಖೆ ಕೈಗೊಳ್ಳಲಿದ್ದು, 15 ದಿನದೊಳಗೆ ವರದಿ ಸಲ್ಲಿಕೆಯಾಗಲಿದೆ.
ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆಯೂ ತನಿಖೆ ಬೆಳಕು ಚೆಲ್ಲಲಿದೆ. ದುರಂತಕ್ಕೆ ಕಾರಣರಾದ ತಪ್ಪಿತಸ್ಥರನ್ನು ತನಿಖಾ ತಂಡ ಪತ್ತೆ ಮಾಡಲಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತಂಡ ಶಿಫಾರಸು ಮಾಡಲಿದೆ.
ಬಾಗ್ಜನ್ ಎಂಬಲ್ಲಿರುವ ಅನಿಲ ಬಾವಿಯಲ್ಲಿ 16 ದಿನಗಳಿಂದ ಅನಿಲ ಸೋರಿಕೆಯಾಗಿ, ಮಂಗಳವಾರ ಅದಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು.