ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಿಂದ ಆಯ್ದ ಸರಕು ಆಮದು ನಿಷೇಧಕ್ಕೆ ಕೇಂದ್ರ ಚಿಂತನೆ

Last Updated 27 ಜೂನ್ 2020, 6:04 IST
ಅಕ್ಷರ ಗಾತ್ರ

ನವದೆಹಲಿ: ಚೀನಾದ ಸರಕುಗಳ ಆಮದು ನಿಷೇಧಿಸಬೇಕು ಎಂಬ ಕೂಗು ದೇಶದಲ್ಲಿ ಕೇಳಿ ಬರುತ್ತಿದೆ. ಆದರೆ, ಅಗತ್ಯವಲ್ಲದ ವಸ್ತುಗಳ ಆಮದಿನ ಮೇಲೆ ಮಾತ್ರ ನಿರ್ಬಂಧ ಹೇರುವ ಬಗ್ಗೆ ಕೇಂದ್ರವು ಚಿಂತಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಆಟೊಮೊಬೈಲ್‌, ಔಷಧ, ಕೆಲವು ಎಲೆಕ್ಟ್ರಾನಿಕ್‌ ವಸ್ತುಗಳ ಆಮದು, ದೇಶದ ತಯಾರಿಕಾ ಕ್ಷೇತ್ರದ ಪ್ರಗತಿ ಮತ್ತು ಉದ್ಯೋಗ ಸೃಷ್ಟಿಗೆ ನೆರವಾಗುತ್ತಿವೆ. ಹಾಗಾಗಿ, ಈ ಸರಕುಗಳಿಗೆ ದೇಶೀಯ ಪರ್ಯಾಯ ದೊರೆಯುವವರೆಗೆ ಆಮದು ಮುಂದುವರಿಯಲಿದೆ.

‘ದೇಶವು ಕ್ರಮೇಣ ಆಮದು ಪರ್ಯಾಯದತ್ತ ಸಾಗಲಿದೆ. ಇದು ರಾತ್ರಿ ಬೆಳಗಾಗುವಾಗ ಸಾಧ್ಯವಾಗದು. ಈ ಅವಧಿಯಲ್ಲಿ ತಯಾರಿಕೆ ಮತ್ತು ಉದ್ಯೋಗ ಸೃಷ್ಟಿಗೆ ಗಮನ ಹರಿಸಲಾಗುವುದು. ನಮ್ಮ ಉದ್ಯಮಗಳು ಉಸಿರುಗಟ್ಟುವಂತೆ ಮಾಡಲಾಗದು. ಅತ್ಯಂತ ಅಗತ್ಯ ಎನ್ನಬಹುದಾದ ಕೆಲವು ಸರಕುಗಳಿವೆ. ಅಂತಹವುಗಳ ಆಮದು ಮುಂದುವರಿಯಲಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೇಶೀಯವಾಗಿ ತಯಾರಿಸಬಹುದಾದ ಸರಕುಗಳನ್ನು ಗುರುತಿಸುವ ಕೆಲಸವನ್ನು ಸರ್ಕಾರ ಮತ್ತು ಉದ್ಯಮ ವಲಯ ಆರಂಭಿಸಿದೆ. ಕೆಲವು ರಾಸಾಯನಿಕಗಳು, ಆಟೊಮೊಬೈಲ್‌ ಬಿಡಿಭಾಗಗಳು, ಕರಕುಶಲ ವಸ್ತುಗಳು, ಸೌಂದರ್ಯವರ್ಧಕಗಳು, ಕೃಷಿ ಸಲಕರಣೆಗಳು, ಎಲೆಕ್ಟ್ರಾನಿಕ್‌ ವಸ್ತುಗಳ ದೇಶೀಯ ತಯಾರಿಕೆ ಆರಂಭಿಸಲು ದೀರ್ಘ ಕಾಲ ಬೇಕಾಗಿಲ್ಲ. ಹಾಗಾಗಿ, ದೇಶೀಯ ಕಾರ್ಖಾನೆಗಳ ಸಾಮರ್ಥ್ಯ ವೃದ್ಧಿಗೆ ಬೇಕಾದ ಕೆಲಸಗಳನ್ನು ಸರ್ಕಾರ ಮಾಡುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಟೊಮೊಬೈಲ್‌ನ ಕೆಲವು ಬಿಡಿಭಾಗಗಳು, ಔಷಧಗಳನ್ನು ಅಲ್ಪಾವಧಿಯಿಂದ ಮಧ್ಯಮ ಅವಧಿಯೊಳಗೆ ತಯಾರಿಸಲು ಸಾಧ್ಯ ಆಗದೇ ಇರಬಹುದು. ಅವುಗಳನ್ನು ದೇಶೀಯವಾಗಿ ತಯಾರಿಸುವುದು ವೆಚ್ಚದಾಯಕವೂ ಆಗಬಹುದು. ಹೀಗಾಗಿ, ಇಂತಹ ಸರಕುಗಳ ಆಮದು ಮುಂದುವರಿಯಬಹುದು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಆರು ಕೋಟಿ ಸದಸ್ಯರನ್ನು ಹೊಂದಿರುವ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವು ‘ಚೀನಾ ಸರಕು ಬಹಿಷ್ಕರಿಸಿ’ ಎಂಬ ಅಭಿಯಾನದ ಮುಂಚೂಣಿಯಲ್ಲಿದೆ. ಈ ವರ್ಷದ ದೀಪಾವಳಿಯನ್ನು ಚೀನಾ ಸರಕುರಹಿತವಾಗಿ ಆಚರಿಸಬೇಕು ಎಂಬ ಕರೆಯನ್ನೂ ಈ ಒಕ್ಕೂಟ ಕೊಟ್ಟಿದೆ.

ಗಡಿಯಲ್ಲಿ ಸನ್ನದ್ಧತೆ ರಾಜನಾಥ್‌–ನರವಣೆ ಚರ್ಚೆ

ಸೇನಾ ಮುಖ್ಯಸ್ಥ ಜ. ಎಂ.ಎಂ. ನರವಣೆ ಅವರುರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಜತೆ ಮಾತುಕತೆ ನಡೆಸಿದ್ದಾರೆ. ಪ್ರಕ್ಷುಬ್ಧವಾಗಿರುವ ಲಡಾಖ್‌ನ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿದ್ದ ನರವಣೆ ಅವರು ಅಲ್ಲಿಂದ ಹಿಂದಿರುಗಿದ ಕೆಲವೇ ತಾಸುಗಳಲ್ಲಿ ರಕ್ಷಣಾ ಸಚಿವರನ್ನು ಭೇಟಿಯಾಗಿದ್ದಾರೆ.

ಭಾರತ–ಚೀನಾದ ಪೂರ್ವ ಲಡಾಖ್‌ನ ಗಡಿಯಲ್ಲಿ ಬಿಕ್ಕಟ್ಟು ಮುಂದುವರಿದರೆ ಅದನ್ನು ಎದುರಿಸಲು ಸೇನೆಯು ಯಾವೆಲ್ಲ ಸನ್ನದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬ ಬಗ್ಗೆ ಈ ಇಬ್ಬರು ಚರ್ಚೆ ನಡೆಸಿದ್ದಾರೆ.

ಸಂಘರ್ಷದ ಸ್ಥಳವಾದ ಗಾಲ್ವನ್‌ ಕಣಿವೆಯಿಂದ ಸೈನಿಕರು ಮತ್ತು ಯುದ್ಧೋಪಕರಣಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಎರಡೂ ದೇಶಗಳು ಒಪ್ಪಿವೆ. ಆದರೆ, ಚೀನಾದ ಮುಂದಿನ ನಡೆಯ ಬಗ್ಗೆ ಭಾರತದ ಸೇನೆಗೆ ಅನುಮಾನ ಇದೆ. ಅದಲ್ಲದೆ, ಸೈನಿಕರನ್ನು ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆಗೆ ವಾರಗಳೇ ಬೇಕಾಗಬಹುದು ಎನ್ನಲಾಗಿದೆ.

ಹಾಗಾಗಿ, ಮುಂದಿನ ಸಿದ್ಧತೆಗಳ ಬಗ್ಗೆ ರಕ್ಷಣಾ ಸಚಿವ ಮತ್ತು ಸೇನಾ ಮುಖ್ಯಸ್ಥರ ನಡುವೆ ಮಾತುಕತೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT