ಭೋಪಾಲ್: ಕಾಂಗ್ರೆಸ್ನ 16 ಬಂಡಾಯ ಶಾಸಕರ ರಾಜೀನಾಮೆ ಅಂಗೀಕಾರವಾದ ಬಳಿಕ ಬಹುಮತ ಕಳೆದುಕೊಂಡಿದ್ಡ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.ಇದರೊಂದಿಗೆ 15 ತಿಂಗಳ ಕಾಂಗ್ರೆಸ್ ಸರ್ಕಾರ ಪತನಗೊಂಡಿತು.
ಈ ಬೆಳವಣಿಗೆಯೊಂದಿಗೆ ರಾಜ್ಯದಲ್ಲಿ 17 ದಿನಗಳಿಂದ ಮೂಡಿದ್ದ ರಾಜಕೀಯ ಅನಿಶ್ಚಿತತೆ ನಿರ್ಣಾಯಕ ಹಂತ ತಲುಪಿದಂತಾಗಿದೆ. ಸದ್ಯ, ಶಾಸನಸಭೆಯಲ್ಲಿ ಅಗತ್ಯ ಸದಸ್ಯ ಬಲವುಳ್ಳ ಬಿಜೆಪಿಗೆ ಸರ್ಕಾರ ರಚಿಸುವ ಹಾದಿ ಸುಗಮವಾಗಿದೆ.
‘ಕಮಲನಾಥ್ ಅವರ ರಾಜೀನಾಮೆಯನ್ನು ರಾಜ್ಯಪಾಲ ಲಾಲ್ಜೀ ಟಂಡನ್ ಅಂಗೀಕರಿಸಿದ್ದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿ ಯಲು ಸೂಚಿಸಿದ್ದಾರೆ’ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.
ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಂತೆ ಪ್ರಕರಣ ಸುಪ್ರೀಂ ಕೋರ್ಟ್ ಮೇಟ್ಟಿಲೇರಿತ್ತು. ಶುಕ್ರವಾರವೇ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸಲು ನ್ಯಾಯಪೀಠ ಸೂಚಿಸಿತ್ತು. ಆದರೆ, ವಿಶ್ವಾಸಮತ ಕೋರುವ ಮೊದಲೇ ಕಮಲನಾಥ್ ರಾಜೀನಾಮೆ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರ ಬೆಂಬಲಿಗರಾಗಿದ್ದ 22 ಶಾಸಕರು, ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿಂದೆ ಆರು ಶಾಸಕರ ರಾಜೀನಾಮೆ ಅಂಗೀಕಾರವಾಗಿತ್ತು. ಉಳಿದ 16 ಶಾಸಕರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದುಗುರುವಾರ ತಡರಾತ್ರಿ ಸ್ಪೀಕರ್ ಪ್ರಕಟಿಸಿದ್ದರು.
ರಾಜೀನಾಮೆಗೂ ಮೊದಲು ರಾಜಕೀಯ ಬಿಕ್ಕಟ್ಟಿಗಾಗಿ ಬಿಜೆಪಿ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರ ವಿರುದ್ಧ ಕಮಲನಾಥ್ ಹರಿಹಾಯ್ದರು. ‘ಕಳೆದ ಎರಡು ವಾರದ ಬೆಳವಣಿಗೆಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಕುಂದುತರುವ ಅಧ್ಯಾಯವಾಗಿತ್ತು’ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಅವರು, ‘ಬಿಜೆಪಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕೊಂದಿದ್ದು, ತಮ್ಮ ನೇತೃತ್ವದ ಸರ್ಕಾರದ ವಿರುದ್ಧ ಸಂಚು ನಡೆಸಿತು. ರಾಜ್ಯದಲ್ಲಿನ ಪ್ರಸ್ತುತ ಬಿಕ್ಕಟ್ಟಿಗೆ ಪಕ್ಷದ ಮಾಜಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರೇ ಕಾರಣ’ ಎಂದೂ ಆರೋಪಿಸಿದರು.
ಸರ್ಕಾರದ ಪತನ ಕುರಿತು ಟ್ವೀಟ್ ಮಾಡಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ‘ಇದು, ರಾಜ್ಯದ ಜನರ ಗೆಲುವು. ರಾಜಕಾರಣದ ಉದ್ದೇಶ ಜನರ ಸೇವೆಯಾಗಬೇಕು. ಆದರೆ, ಸರ್ಕಾರ ಜನರ ಸೇವೆಗೆ ಒತ್ತು ನೀಡಿರಲಿಲ್ಲ’ ಎಂದಿದ್ದಾರೆ.