ನವದೆಹಲಿ:ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ಮನವಿ ಮಾಡಿ ಸಂತ್ರಸ್ತೆಯ ಪೋಷಕರು ಸಲ್ಲಿಸಿದ್ದ ಅರ್ಜಿಯನ್ನು ಪಟಿಯಾಲಹೌಸ್ ನ್ಯಾಯಾಲಯ ಶುಕ್ರವಾರ ಇದೇ 18ಕ್ಕೆ ಮುಂದೂಡಿದೆ.
ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಡಿ.17) ವಿಚಾರಣೆ ನಡೆಸಲಿದೆ.
ಅಪರಾಧಿಗಳಿಗೆ ಇರುವ ಕಾನೂನು ಹೋರಾಟದ ಆಯ್ಕೆಗಳ ಬಗ್ಗೆ ಮಾಹಿತಿ ನೀಡುವಂತೆ ತಿಹಾರ್ ಜೈಲಿನ ಅಧಿಕಾರಿಗಳಿಗೆ ನ್ಯಾಯಮೂರ್ತಿ ಸತೀಶ್ ಕುಮಾರ್ ಅರೊರಾ ಹಿಂದಿನ ವಿಚಾರಣೆ ವೇಳೆ ಸೂಚಿಸಿದ್ದರು. ಈ ಮಧ್ಯೆ,ಅಪರಾಧಿಗಳಿಗೆ ಇನ್ನೂ ಕಾನೂನು ಹೋರಾಟದ ಆಯ್ಕೆಗಳಿವೆ ಎಂದು ಅವರ ಪರ ವಕೀಲ ಎ.ಪಿ.ಸಿಂಗ್ ಹೇಳಿದ್ದಾರೆ.
2012ರ ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮುಕೇಶ್ ಸಿಂಗ್, ವಿನಯ್ ಶರ್ಮಾ, ಪವನ್ ಕುಮಾರ್ ಈ ಮೊದಲು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಗಳನ್ನು 2018ರ ಜುಲೈ 19ರಂದು ಕೋರ್ಟ್ ವಜಾಗೊಳಿಸಿತ್ತು.