ಆಂಧ್ರಪ್ರದೇಶ: ಟಿವಿ9ಸಿಇಒ ರವಿಪ್ರಕಾಶ್ ವಿರುದ್ಧ ಹೈದರಾಬಾದ್ನ ಸೈಬರಾಬಾದ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣದಾಖಲಿಸಲಾಗಿದೆ.
ಆಳಂದಾ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ನ ಪಿ.ಕೌಶಿಕ್ ರಾವ್ ಎಂಬುವರು ಈ ಸಂಬಂಧ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ (TNM) ವರದಿ ಮಾಡಿದೆ.
ಕೆಲ ದಿನಗಳ ಹಿಂದೆ ಆಳಂದ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ಟಿವಿ9ನ ಶೇ.80ರಷ್ಟು ಷೇರುಗಳನ್ನು ಖರೀದಿಸಿದೆ.ಈ ಸಮಯದಲ್ಲಿ ಆಳಂದ ಮೀಡಿಯಾ ತನ್ನ ಕಡೆಯ ನಿರ್ದೇಶಕರನ್ನು ನೇಮಕ ಮಾಡಲು ಮುಂದಾಗಿದೆ. ಆದರೆ, ಆಳಂದ ಮೀಡಿಯಾದ ಈ ಪ್ರಕ್ರಿಯೆಗೆ ರವಿಪ್ರಕಾಶ್ ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ. ಇದರಿಂದಾಗಿ ಕೆಲವುದಾಖಲೆಗಳನ್ನು ಟಿವಿ9 ರವಿಪ್ರಕಾಶ್, ನಟ ಶಿವಾಜಿ ಹಾಗೂ ಎಂ.ವಿ.ಕೆ.ಎನ್.ಮೂರ್ತಿ ಅವರು ತಿದ್ದಿ ತಮ್ಮ ವಿರುದ್ಧ ಅಪರಾಧಿಕ ಒಳಸಂಚು ನಡೆಸಿದ್ದಾರೆ ಎಂದು ಸೈಬರ್ ಠಾಣೆ ಪೊಲೀಸರಿಗೆ ಪಿ.ಕೌಶಿಕ್ ರಾವ್ ದೂರುನೀಡಿದ್ದಾರೆ ಎಂದು ಟಿಎನ್ ಎಂ ವರದಿ ಮಾಡಿದೆ.
ಈ ಸಂಬಂಧ ದೂರು ಪಡೆದ ಸೈಬರ್ ಠಾಣೆ ಪೊಲೀಸರು ಇವರ ವಿರುದ್ಧ 406, 420, 467, 469, 471,120 ಬಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಹಾಗೂ 72ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರವಿಪ್ರಕಾಶ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಒಂದು ಪ್ರಕರಣದಲ್ಲಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಪಾಸಣೆ ವೇಳೆ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಹಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದು, ಇವುಗಳನ್ನು ಹೈದರಾಬಾದ್ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಮುಂದಿನ ತನಿಖೆ ಪ್ರಗತಿಯಲ್ಲಿದ್ದು, ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರದ ಮುಂದಿದ್ದು, ಮೇ 16 ರಂದು ವಿಚಾರಣೆ ನಡೆಯಲಿದೆ ಎಂದು ರವಿಪ್ರಕಾಶ್ ಸ್ಥಳೀಯ ಸುದ್ದಿಸಂಸ್ಥೆಗೆತಿಳಿಸಿದ್ದಾರೆ.
ಪ್ರಕರಣ ದಾಖಲಾದ ನಂತರಟಿವಿ9 ತೆಲುಗು ಚಾನೆಲ್ನಲ್ಲಿ ಲೈವ್ಗೆ ಬಂದ ಸಿಇಒ ರವಿಪ್ರಕಾಶ್ 'ನನ್ನನ್ನು ಇದುವರೆಗೂ ಯಾರೂ ಬಂಧಿಸಿಲ್ಲ. ಮುಂದೆಯೂ ಬಂಧಿಸುವುದಿಲ್ಲ, ನಾನು ಈಗಲೂ ಟಿವಿ9 ಸಂಸ್ಥೆಯ ಸಿಇಒ ಆಗಿಯೇ ಮಾತನಾಡುತ್ತಿದ್ದೇನೆ. ಅಲ್ಲದೆ, ನನ್ನ ವಿರುದ್ಧ ಎಲ್ಲಾ ಆರೋಪಗಳೂ ಸುಳ್ಳು, ಒಂದು ವರ್ಗ ನನ್ನ ವಿರುದ್ಧ ಪಿತೂರಿ ನಡೆಸುತ್ತಿದೆ' ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.