ನವದೆಹಲಿ (ಪಿಟಿಐ): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ ಇರುವುದರಿಂದಐಸೊಲೇಷನ್ ವಾರ್ಡ್ ಸೇರಿದಂತೆ ಚಿಕಿತ್ಸೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳಿರುವ 500 ರೈಲು ಬೋಗಿಗಳನ್ನು ತಕ್ಷ ಣವೇ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಕೋವಿಡ್–19 ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ನಗರ ಪಾಲಿಕೆಗಳ ಮೇಯರ್, ಆಯುಕ್ತರ ಜತೆ ನಡೆದ ಸಭೆ ಬಳಿಕ ಶಾ ಈ ಮಾಹಿತಿ ನೀಡಿದರು.
ಪರೀಕ್ಷಾ ಸಾಮರ್ಥ್ಯ ದ್ವಿಗುಣ: ಮುಂದಿನ ಎರಡು ದಿನಗಳ ಕಾಲ ಸೋಂಕು ಪರೀಕ್ಷೆಯನ್ನು ದುಪ್ಪಟ್ಟುಗೊಳಿಸುವುದು ಹಾಗೂ ಹಾಟ್ಸ್ಪಾಟ್ಗಳಲ್ಲಿ (ಸೋಂಕಿತರು ಹೆಚ್ಚಾಗಿ ಇರುವ ಪ್ರದೇಶ) ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸಲಾಗುವುದು ಎಂದು ಶಾ ತಿಳಿಸಿದರು.
ಶೇ 60 ಬೆಡ್ ಮೀಸಲು: ‘ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ನೇತೃತ್ವದಲ್ಲಿಕೇಂದ್ರ ಆರೋಗ್ಯ ಇಲಾಖೆ, ದೆಹಲಿ ಸರ್ಕಾರದ ಆರೋಗ್ಯ ಇಲಾಖೆ, ಏಮ್ಸ್ ಮತ್ತು ದೆಹಲಿಯ ಮೂರು ನಗರ ಪಾಲಿಕೆಗಳ ಅಧಿಕಾರಿಗಳ ತಂಡ ಎಲ್ಲ ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ 60 ಬೆಡ್ ಕೊರೊನಾ ಚಿಕಿತ್ಸೆಗೆ ಮೀಸಲು, ಪರೀಕ್ಷೆ ಹಾಗೂ ಚಿಕಿತ್ಸಾ ವೆಚ್ಚದ ನಿಗದಿಯ ಬಗ್ಗೆ ವರದಿ ತಯಾರಿಸಲಿದೆ’ ಎಂದರು.
‘ದೆಹಲಿಯಲ್ಲಿ ಕೊರೊನಾ ವಿರುದ್ಧ ಕೇಂದ್ರ ಹಾಗೂ ದೆಹಲಿ ಸರ್ಕಾರ ಜೊತೆಯಾಗಿ ಹೋರಾಡಲಿವೆ’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.ದೆಹಲಿಯಲ್ಲಿ 39 ಸಾವಿರ ಕೋವಿಡ್–19 ಪ್ರಕರಣಗಳು ವರದಿಯಾಗಿದೆ.