ನವದೆಹಲಿ:ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಸದೃಢಗೊಳಿಸುವ ಉದ್ದೇಶದಿಂದ ವಿದೇಶಾಂಗ ಸಚಿವ ಜೈಶಂಕರ್ ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲ ಶಾಹಿದ್ ಅವರ ಜೊತೆ ಸಭೆ ನಡೆಸಿದರು.
ನಾಲ್ಕು ವರ್ಷಗಳ ಬಳಿಕ ಉಭಯ ದೇಶಗಳ ನಡುವೆ ಜಂಟಿ ಆಯೋಗ ಸಭೆ (ಜೆಸಿಎಂ)ನಡೆಯುತ್ತಿದೆ. ಮಾಲ್ಡೀವ್ಸ್ ಸರ್ಕಾರದ ಹಿರಿಯ ಸಚಿವರು, ಅಧಿಕಾರಿಗಳು ಸೇರಿ 31 ಜನರ ನಿಯೋಗ ಭಾರತಕ್ಕೆ ಆಗಮಿಸಿದ್ದು, ಇದರ ನೇತೃತ್ವವನ್ನು ಶಾಹಿದ್ ಅವರು ವಹಿಸಿದ್ದಾರೆ.
‘ವಿದೇಶಾಂಗ ಸಚಿವರಿಗೆ ಹಾರ್ದಿಕ ಸ್ವಾಗತ. ಆಯೋಗದ ಸಭೆಯ ನಂತರ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಹಕಾರ ಹೊಸ ಉತ್ತುಂಗಕ್ಕೇರಲಿದೆ’ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
‘ಮಾಲ್ಡೀವ್ಸ್ ಅಭಿವೃದ್ಧಿಗಾಗಿ ಸಹಕಾರ ನೀಡಲು ಭಾರತ ಬದ್ಧವಾಗಿದೆ’ ಎಂದು ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಮೋದಿ, ಜೂನ್ನಲ್ಲಿ ಮಾಲ್ಡೀವ್ಸ್ಗೆ ಪ್ರವಾಸ ಕೈಗೊಂಡಿದ್ದರು.