ಶ್ರೀನಗರ: ಕೋವಿಡ್ 19 ಸೋಂಕಿನಿಂದ ಇಲ್ಲಿನ ಎದೆರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 65 ವರ್ಷದ ವ್ಯಕ್ತಿಯೊಬ್ಬರು ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕೋವಿಡ್ ಸೋಂಕಿನಿಂದ ಉಂಟಾದ ಮೊದಲ ಸಾವು ಇದಾಗಿದೆ. ಈ ವ್ಯಕ್ತಿಯು ಹಲವು ದಿನಗಳಿಂದ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದರು.
ದೆಹಲಿಯಿಂದ ಈಚೆಗಷ್ಟೇ ಕಾಶ್ಮೀರದ ಶ್ರೀನಗರಕ್ಕೆ ಬಂದಿದ್ದ ಇವರು ದೆಹಲಿ ಹಾಗೂ ಉತ್ತರ ಪ್ರದೇಶದ ವಿವಿಧೆಡೆ ನಡೆದಿದ್ದ ಧಾರ್ಮಿಕ ಸಭೆಯಲ್ಲಿ (ತಬ್ಲಿಘಿ ಜಮಾತ್) ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಮಲೇಷ್ಯಾ ಹಾಗೂ ಇಂಡೊನೇಷ್ಯಾದ ಹಲವು ಜನರು ಭಾಗವಹಿಸಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 11 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿದ್ದು, ಒಬ್ಬರು ಗುಣಮುಖರಾಗಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾದ ಲಡಾಕ್ನಲ್ಲಿ ದಾಖಲಾಗಿದ್ದ 13 ಮಂದಿಯಲ್ಲಿ ಗುರುವಾರ ಮೂವರಿಗೆ ಸೋಂಕು ದೃಢಪಟ್ಟಿಲ್ಲ ಎಂದು ಇಲ್ಲಿನ ಸರ್ಕಾರದ ವಕ್ತಾರ ವಕ್ತಾರ ರಗ್ಜಿನ್ ಸಂಪೆಲ್ ತಿಳಿಸಿದ್ದಾರೆ.