ನವದೆಹಲಿ: ಕೊರೊನಾ ಸೋಂಕು ತಡೆಗಾಗಿ ಭಾನುವಾರ ಸಂಜೆಯಿಂದಲೇ ದೆಹಲಿ ಸರ್ಕಾರ ಘೋಷಿಸಿರುವ ‘ಲಾಕ್ಡೌನ್’ಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
‘ಜನತಾ ಕರ್ಫ್ಯೂ’ ಬೆಂಬಲಾರ್ಥ ಭಾನುವಾರವಿಡೀ ಮನೆ ಬಿಟ್ಟು ಕದಲದ ರಾಷ್ಟ್ರ ರಾಜಧಾನಿಯ ಜನರು ಸೋಮವಾರವೂ ಮನೆಯಲ್ಲೇ ಉಳಿಯುವ ಮೂಲಕ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಅಗತ್ಯವಿರುವ ಅಂತರ ಕಾಯ್ದುಕೊಂಡರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಆಟೊ ರಿಕ್ಷಾ, ಓಲಾ, ಉಬರ್ ಟ್ಯಾಕ್ಸಿ, ದೆಹಲಿ ಸಾರಿಗೆ ನಿಗಮದ ಬಸ್ ಮತ್ತು ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿತ್ತು. ಎಲ್ಲ ಅಂಗಡಿಗಳು ಬಂದ್ ವ್ಯಾಪಾರ– ವಹಿವಾಟು ಬಂದ್ ಆಗಿತ್ತು.
ಅಗತ್ಯ ಮತ್ತು ಅನಿವಾರ್ಯ ಕಾರ್ಯ ನಿಮಿತ್ಯ ಕೆಲವು ಜನರು ಮನೆಯಿಂದ ಹೊರಬಂದರು. ಕುತೂಹಲಕ್ಕಾಗಿ ಮನೆಯಿಂದ ಬಂದ ಯುವ ಜನರನ್ನು ತಡೆದು, ಅರಿವು ಮೂಡಿಸಿದ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದ ದೃಶ್ಯ ಕಂಡುಬಂತು.
ನವದೆಹಲಿ, ಹಳೆ ದೆಹಲಿ, ನೊಯ್ಡಾ, ಗ್ರೇಟರ್ ನೊಯ್ಡಾ, ಗಾಜಿಯಾಬಾದ್, ಗುರುಗ್ರಾಮ ಸೇರಿದಂತೆ ರಾಷ್ಟ್ರ ರಾಜಧಾನಿ ವಲಯ (ಎನ್ಸಿಆರ್)ದ ಎಲ್ಲೆಡೆ ಜನರು ಕೊರೊನಾ ತಡೆ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿ ಮನೆಯಿಂದ ಹೊರಬರಲಿಲ್ಲ.