ಭೋಪಾಲ್: ಪತನದ ಅಂಚಿನಲ್ಲಿರುವ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹರಸಾಹಸ ಮಾಡುತ್ತಿದೆ. ಹೀಗಾಗಿ, ತನ್ನ ಸುಮಾರು 90 ಶಾಸಕರನ್ನು ಜೈಪುರಕ್ಕೆ ಕಳುಹಿಸಿದೆ.
ಬುಧವಾರ ಮಧ್ಯಾಹ್ನ 2.30ಕ್ಕೆ ಭೋಪಾಲ್ನಿಂದ ವಿಶೇಷ ವಿಮಾನದಲ್ಲಿ ಜೈಪುರಕ್ಕೆ ಬಂದ ಶಾಸಕರನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಇತರ ನಾಯಕರು ಸ್ವಾಗತಿಸಿದರು.
ಐಷಾರಾಮಿ ಮೂರು ಬಸ್ಗಳಲ್ಲಿ ದೆಹಲಿ–ಜೈಪುರ ಹೆದ್ದಾರಿಯಲ್ಲಿನ ಎರಡು ರೆಸಾರ್ಟ್ಗಳಿಗೆ ಶಾಸಕರನ್ನು ಕರೆದೊಯ್ಯಲಾಯಿತು.
ಬಿಜೆಪಿ ಸಹ ತನ್ನ ಶಾಸಕರನ್ನು ಗುರುಗ್ರಾಮದಲ್ಲಿನ ಐಷಾರಾಮಿ ಹೋಟೆಲ್ಗೆ ಕಳುಹಿಸಿತು. ರಾಜೀನಾಮೆ ನೀಡಿರುವ 19 ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ರೆಸಾರ್ಟ್ನಲ್ಲಿರಿಸಲಾಗಿದೆ.
’ಶಿವರಾಜ್, ಮಹಾರಾಜ ಒಗ್ಗಟ್ಟಾಗಿದ್ದಾರೆ’ ’ಮಧ್ಯಪ್ರದೇಶದಲ್ಲಿ ಮಹಾರಾಜ ಮತ್ತು ಶಿವರಾಜ ಈಗ ಒಗ್ಗಟ್ಟಾಗಿದ್ದಾರೆ...‘
ಬಿಜೆಪಿ ಹಿರಿಯ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಅವರು ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರಿರುವುದಕ್ಕೆ ನೀಡಿದ ಪ್ರತಿಕ್ರಿಯೆ ಇದು.
* ಬಿಜೆಪಿ ಪ್ರಜಾಪ್ರಭುತ್ದ ಕಗ್ಗೊಲೆ ಮಾಡುತ್ತಿದೆ. ಹಣ ಬಲದಿಂದ ಶಾಸಕರನ್ನು ಖರೀದಿಸುತ್ತಿದೆ. ಇದು ನಾಚಿಕೆಗೇಡಿತನದ ಸಂಗತಿ. ಸಿಂಧಿಯಾ ಅವರನ್ನು ಜನರು ಕ್ಷಮಿಸುವುದಿಲ್ಲ. -ಅಶೋಕ್ ಗೆಹ್ಲೋಟ್, ರಾಜಸ್ಥಾನ ಮುಖ್ಯಮಂತ್ರಿ