ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎರಡು ವಾರಗಳ ಬಳಿಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಆರು ಸಹೋದ್ಯೋಗಿಗಳಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.ಮಹತ್ವದ ಗೃಹ ಖಾತೆಯನ್ನು ಶಿವಸೇನಾ ಪಡೆದುಕೊಂಡರೆ, ಎನ್ಸಿಪಿಗೆ ಹಣಕಾಸು ಖಾತೆ ಲಭಿಸಿದೆ. ಕಂದಾಯ ಇಲಾಖೆ ಕಾಂಗ್ರೆಸ್ ಪಾಲಾಗಿದೆ.
ಶಿವಸೇನಾ ಮುಖಂಡ ಏಕನಾಥ ಶಿಂಧೆ ಅವರಿಗೆ ಗೃಹ, ನಗರಾಭಿವೃದ್ಧಿ, ಅರಣ್ಯ, ಪ್ರವಾಸೋದ್ಯಮ, ಸಂಸದೀಯ ವ್ಯವಹಾರ ಖಾತೆ ನೀಡಲಾಗಿದೆ.ಸುಭಾಷ್ ದೇಸಾಯಿ ಅವರಿಗೆ ಕೈಗಾರಿಕೆ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಕ್ರೀಡಾ, ಸಾರಿಗೆ, ಮರಾಠಿ ಭಾಷೆ ಮತ್ತು ಸಂಸ್ಕೃತಿ ವ್ಯವಹಾರ ಖಾತೆಗಳನ್ನು ವಹಿಸಲಾಗಿದೆ.
ಎನ್ಸಿಪಿಯಜಯಂತ್ ಪಾಟೀಲ್ ಅವರಿಗೆ ಹಣಕಾಸು, ಯೋಜನೆ, ವಸತಿ, ಆರೋಗ್ಯ, ಸಹಕಾರ, ಆಹಾರ ಮತ್ತು ಪೂರೈಕೆ ಇಲಾಖೆಯ ಹೊಣೆ ವಹಿಸಲಾಗಿದೆ.ಕಾಂಗ್ರೆಸ್ನ ಬಾಳಾಸಾಹೇಬ್ ಥೋರಟ್ ಅವರಿಗೆ ಕಂದಾಯ, ಇಂಧನ, ವೈದ್ಯಕೀಯ ಶಿಕ್ಷಣ ಇಲಾಖೆಯ ಜವಾಬ್ದಾರಿ ಸಿಕ್ಕಿದೆ.