ತಿರುವನಂತಪುರ: ಕೇರಳದ ವಯನಾಡ್ ಜಿಲ್ಲೆಯ ಅರಣ್ಯಪ್ರದೇಶದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಯುವಕರೊಬ್ಬರ ಮೃತದೇಹ ಪತ್ತೆಯಾಗಿದ್ದು, ಇವರು ಹುಲಿ ದಾಳಿಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಪುಲ್ಪಳ್ಳಿ ನಿವಾಸಿ ಶಿವಕುಮಾರ್ (23) ಮೃತ ಯುವಕ. ಕಟ್ಟಿಗೆ ಸಂಗ್ರಹಿಸಲು ಮಂಗಳವಾರ ಕಾಡಿಗೆ ತೆರಳಿದ್ದ ಇವರು ರಾತ್ರಿಯಾದರೂ ಮರಳದ ಹಿನ್ನೆಲೆಯಲ್ಲಿ, ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಿನಲ್ಲಿ ಹುಡುಕಾಟ ನಡೆಸಿದ್ದರು. ಶಿವಕುಮಾರ್ ಅವರ ಛಿದ್ರಗೊಂಡಿದ್ದ ಮೃತದೇಹ ಬುಧವಾರ ಪತ್ತೆಯಾಗಿದೆ.
ಮೃತದೇಹ ಪತ್ತೆಯಾಗಿರುವ ಪ್ರದೇಶದಲ್ಲಿ ಈ ಹಿಂದೆ ಹುಲಿಯೊಂದನ್ನು ನೋಡಿದ್ದೆವು. ಅದು ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.