ನವದೆಹಲಿ: ಲಾಕ್ಡೌನ್ನಿಂದಾಗಿ ಕೆಲಸ ಬಿಟ್ಟು ಊರಿಗೆ ಮರಳಿದ ವಲಸೆ ಕಾರ್ಮಿಕರು ಈಗಲೂ ಸಂಕಷ್ಟದಲ್ಲಿದ್ದಾರೆ. ಇಂಥವರಲ್ಲಿ ಮೂರನೇ ಒಂದರಷ್ಟು ಮಂದಿ ಆಹಾರಧಾನ್ಯದ ಕೊರತೆ ಎದುರಿಸುತ್ತಿದ್ದರೆ, ಶೇ 63ರಷ್ಟು ಮಂದಿ ‘ನಮ್ಮ ಜೇಬಿನಲ್ಲಿ ₹100 ಕೂಡ ಉಳಿದಿಲ್ಲ’ ಎಂದು ಹೇಳಿದ್ದಾರೆ.
ಸ್ವಾನ್ (ಸ್ಟ್ರಾಂಡೆಡ್ ವರ್ಕರ್ಸ್ ಆ್ಯಕ್ಷನ್ ನೆಟ್ವರ್ಕ್) ಸಂಸ್ಥೆಯವರು ನಡೆಸಿದ ಮೂರನೇ ಸುತ್ತಿನ ಸಮೀಕ್ಷೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.
ತಮ್ಮ ಯಾತನೆಯನ್ನು ವಿವರಿಸಿ ವಲಸೆ ಕಾರ್ಮಿಕರಿಂದ ಬಂದಿರುವ 5,911 ಕರೆಗಳಲ್ಲಿ 821ನ್ನು ವಿಶ್ಲೇಷಣೆಗೆ ಒಳಪಡಿಸಿ ಮತ್ತು ಮೇ 15ರಿಂದ ಜೂನ್ 1ರೊಳಗಿನ ಅವಧಿಯಲ್ಲಿ 1,963 ಕಾರ್ಮಿಕರ ಜತೆ ಸಂವಾದ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ.
* ಬಹಳಷ್ಟು ವಲಸೆ ಕಾರ್ಮಿಕರು ಬಸ್ ಮತ್ತು ಶ್ರಮಿಕ ರೈಲುಗಳ ಮೂಲಕ ಊರಿಗೆ ಮರಳಿದ್ದಾರೆ. ಶೇ 11ರಷ್ಟು ಮಂದಿ ಟ್ರಕ್ ಅಥವಾ ಇತರ ವಾಹನಗಳ ಮೂಲಕ ಮತ್ತು ಶೇ 6ರಷ್ಟು ಮಂದಿ ಕಾಲ್ನಡಿಗೆಯಲ್ಲೇ ಹೋಗಿದ್ದಾರೆ.
* 68 ದಿನಗಳ ಲಾಕ್ಡೌನ್ನ ಮೊದಲ ಭಾಗದಲ್ಲಿ ವಲಸೆ ಕಾರ್ಮಿಕರು ಆಹಾರ, ಹಣ ಇಲ್ಲದೆ ಸಂಕಷ್ಟಪಟ್ಟರೆ ದ್ವಿತೀಯ ಭಾಗದಲ್ಲಿ ಊರಿಗೆ ಮರಳುವ ಯಾತ್ರೆಯ ಯಾತನೆ ಅನುಭವಿಸಿದ್ದರು.
* ಆರ್ಥಿಕ ಚಟುವಟಿಕೆಗಳು ಪುನಃ ಆರಂಭವಾಗಿರುವುದರಿಂದ ವಲಸಿಗರು ಊರಿಗೆ ಮರಳುತ್ತಿಲ್ಲ ಎಂಬ ಕಾರಣಕ್ಕೆ ಶ್ರಮಿಕ ರೈಲುಗಳನ್ನು ರದ್ದು ಮಾಡುವುದಾಗಿ ಸರ್ಕಾರ ಹೇಳಿದೆ. ಆದರೆ ಶೇ 55ರಷ್ಟು ಕಾರ್ಮಿಕರು ಈಗಲೂ ಊರಿಗೆ ಮರಳಲು ಉತ್ಸುಕರಾಗಿದ್ದಾರೆ.