ಇಸ್ಲಾಮಾಬಾದ್: ‘ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ’ ಎಂದು ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ನ್ಯಾಷನಲ್ ಅಸೆಂಬ್ಲಿಯಲ್ಲಿ ಆರೋಪಿಸಿದ್ದಾರೆ.
‘ಮುಂಬೈ ಮಾದರಿಯ ದಾಳಿ ನಡೆಸಲು ಭಾರತ ಪ್ರಯತ್ನಿಸಿತ್ತು. ಅವರು ಅಸ್ಥಿರತೆ ಉಂಟುಮಾಡಲು ಬಯಸುತ್ತಿದ್ದಾರೆ. ಭಾರತವೇ ಈ ದಾಳಿ ನಡೆಸಿದೆ ಎಂಬುದರಲ್ಲಿ ಸಂಶಯವೇ ಇಲ್ಲ’ ಎಂದು ಅವರು ಹೇಳಿದ್ದಾರೆ.
‘ಭಾರಿ ದಾಳಿಗೆ ಭಯೋತ್ಪಾದಕ ಸಂಘಟನೆ ಸಂಚು ರೂಪಿಸಿತ್ತು. ಆದರೆ, ನಮ್ಮ ಭದ್ರತಾ ಪಡೆಗಳು ಅದನ್ನು ವಿಫಲಗೊಳಿಸಿವೆ’ ಎಂದು ಅವರು ಹೇಳಿದ್ದಾರೆ.
ಸೋಮವಾರ ವಿದೇಶಾಂಗ ಸಚಿವ ಖುರೇಶಿ ಅವರು, ದಾಳಿಗೆ ಭಾರತವನ್ನೇ ದೂಷಿಸಿದ್ದರು. ಆದರೆ, ಈ ಆರೋಪವನ್ನು ಭಾರತ ತಳ್ಳಿ ಹಾಕಿತ್ತು.
ದಾಳಿಯ ಹೊಣೆಯನ್ನು ದಿ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ(ಬಿಎಲ್ಎ) ಜೊತೆ ಸಂಪರ್ಕ ಹೊಂದಿರುವ ಮಜೀದ್ ಬ್ರಿಗೇಡ್ ಹೊತ್ತುಕೊಂಡಿದೆ. ಈ ಸಂಘಟನೆಯನ್ನು ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ನಿಷೇಧಿಸಲಾಗಿದೆ.
ಇಲ್ಲಿನ ಪಾಕಿಸ್ತಾನ ಷೇರು ವಿನಿಮಯ ಕೇಂದ್ರದ(ಪಿಎಸ್ಎಕ್ಸ್) ಮೇಲೆ ಸೋಮವಾರ ಬೆಳಿಗ್ಗೆ ನಾಲ್ವರು ಶಸ್ತ್ರಸಜ್ಜಿತ ಉಗ್ರರು ಗ್ರೆನೈಡ್, ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ, ಓರ್ವ ಪೊಲೀಸ್ ಅಧಿಕಾರಿ ಹಾಗೂ ಇಬ್ಬರು ನಾಗರಿಕರು ಸೇರಿ 11 ಜನರು ಮೃತಪಟ್ಟಿದ್ದರು.