ನವದೆಹಲಿ: ಆರ್ಎಸ್ಎಸ್ ಬೆಂಬಲಿತ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್ಎಂ) ಸಿಎಎ ಪರ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಗುಂಪೊಂದು ಪ್ರತಿಭಟನೆ ನಡೆಸಿ, ಅಡ್ಡಿಪಡಿಸಿತು.
ಆರ್ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಸೇರಿದಂತೆ ಪ್ರಮುಖ ಉಪನ್ಯಾಸಕರು ವೇದಿಕೆಗೆ ಬರುತ್ತಿದ್ದಂತೆ ಮುಂದಿನ ಸಾಲಿನಲ್ಲಿ ಕುಳಿತಿದ್ದ ಪ್ರತಿಭಟನಕಾರರು ಎದ್ದುನಿಂತು ಸಿಎಎ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ಬಂದ ಪೊಲೀಸರು ಈ ಗುಂಪನ್ನು ವಶಕ್ಕೆ ಪಡೆಯಿತು.
ಪ್ರತಿಭಟನಕಾರರನ್ನು ಕಾಂಗ್ರೆಸ್ ಕಳುಹಿಸಿದೆ ಎಂದು ಎಂಆರ್ಎಂ ಆರೋಪಿಸಿದೆ.
ಇಂದ್ರೇಶ್ ಕುಮಾರ್ ಮಾತನಾಡಿ, ‘ಭಾರತ ವಿಭಜನೆಯಾಗಲು ಕಾಂಗ್ರೆಸ್ ಕಾರಣ. ಇಂದಿನ ಭಾರತೀಯ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲು ಬಯಸುವುದಿಲ್ಲ. ಆದರೆ, ಹೋಗಲು ಬಯಸುವವರು ರಾಕ್ಷಸ ಮನಸ್ಥಿತಿಯುಳ್ಳವರು’ ಎಂದು ಹೇಳಿದರು.
‘ವಾಕ್ ಸ್ವಾತಂತ್ರ್ಯ ತಮಗಾಗಿ ಮಾತ್ರ ಇದೆ ಎಂದು ಕೆಲವರು ನಂಬಿದ್ದಾರೆ. ಸಭೆಗೆ ಚರ್ಚಿಸಲು ಬರದೇ, ಗಲಾಟೆ ಮಾಡುವ ಉದ್ದೇಶದಿಂದ ಬಂದಿದ್ದರು’ ಎಂದು ವಿಎಚ್ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದರು.