ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲೊಬ್ಬನಾದ ವಿನಯ್ ಶರ್ಮಾನನ್ನು ಕೊನೆಯ ಬಾರಿಗೆ ಭೇಟಿಯಾಗಿ, ಆತನಿಗೆ ಇಷ್ಟವಾದ ಪೂರಿ, ಪಲ್ಯ ಹಾಗೂ ಕಚೋರಿಯನ್ನು ತಿನಿಸುವಾಸೆ ಆತನ ತಾಯಿಗೆ.
ನೇಣಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಂಬಂಧ ವಿನಯ್ ಶರ್ಮಾ ಪರಿಹಾರಾತ್ಮಕ ಅರ್ಜಿ ಸಲ್ಲಿಸಿದ. ಆದರೆ, ಜನವರಿ 14ರಂದು ತಿರಸ್ಕರಿಸಿತು. ಕ್ಷಮಾ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೂ ತಿರಸ್ಕರಿಸಿದರು. ಈಗ ವಿನಯ್ ಶರ್ಮಾಗೆ ಗಲ್ಲು ತಪ್ಪಿದ್ದಲ್ಲ.
ಆದರೆ, ಆತನ ತಾಯಿಗೆ ಮಾತ್ರ ಆತನ ಇಷ್ಟವಾದ ಖಾದ್ಯಗಳನ್ನು ಜೈಲಿಗೆ ಒಯ್ಯುವಾಸೆ. ತನ್ನನ್ನು ಮಾತನಾಡಿಸಲು ಬಂದ ಮಾಧ್ಯಮ ಪ್ರತಿನಿಧಿಗಳ ಮುಂದೆ ಈ ಆಸೆ ತೋಡಿಕೊಂಡ ಆಕೆ, ‘ನೀವು ಏನು ಬರೆಯುತ್ತೀರಿ? ನೀವು ಬರೆಯುವುದರಿಂದ ಏನಾದರೂ ಆಗಿದೆಯಾ. ದೇವರು ಮನಸ್ಸು ಮಾಡಿದರೆ ಆತ (ವಿನಯ್) ಉಳಿಯುತ್ತಾನೆ’ ಎಂದು ಕೋಪದಿಂದಲೇ ಹೇಳಿದರು.
‘ಇದು ದೇವರ ಇಚ್ಛೆ. ಈಗ ಹರಡುತ್ತಿರುವ ಕೊರೊನಾ ವೈರಸ್ನಿಂದಾಗುತ್ತಿರುವ ಅನಾಹುತ ನೋಡಿ. ಯಾರು ಬದುಕಬೇಕು, ಯಾರು ಸಾಯಬೇಕು ಎಂಬುದರಿಂದ ಹಿಡಿದು ಯಾವಾಗ ಏನು ಆಗಬೇಕು ಎಂಬುದನ್ನು ದೇವರು ನಿರ್ಧರಿಸುತ್ತಾನೆ’ ಎಂದು ಹೇಳಿದರು.
ಅಂತಹ ತಳಮಳ, ದುಗುಡದ ನಡುವೆಯೂ ಆಕೆಯ ಮುಖದಲ್ಲಿ ಆಶಾಭಾವ ಮೂಡುತ್ತಿತ್ತು. ‘ಈ ವರೆಗೂ ನಾನು ತಯಾರಿಸಿದ ಆಹಾರವನ್ನು ನನ್ನ ಮಗನಿಗೆ ಕೊಡು ಜೈಲು ಅಧಿಕಾರಿಗಳು ಬಿಡಲಿಲ್ಲ. ಈಗ ಒಂದು ವೇಳೆ ಅವರು ಅನುಮತಿ ನೀಡಿದರೆ, ನಾನು ಅವನಿಗೆ ಪೂರಿ, ಪಲ್ಯ ಹಾಗೂ ಕಚೋರಿ ತೆಗೆದುಕೊಂಡು ಹೋಗುತ್ತೇನೆ’ ಎಂದು ಹೇಳಿದರು