ಜೋದ್ಪುರ: ’ರಫೇಲ್ ಒಪ್ಪಂದ ಬಗ್ಗೆ ಸುಪ್ರೀಂಕೋರ್ಟ್ ಉತ್ತಮ ತೀರ್ಪನ್ನು ನೀಡಿದೆ. ಆ ಯುದ್ಧ ವಿಮಾನದಿಂದ ಭಾರತೀಯ ವಾಯುಪಡೆಯಗೆ ತೀರ ಅನಿವಾರ್ಯವಾಗಿದೆ ಜೊತೆಗೆ ಅದರಿಂದ ಸೇನೆ ಬೃಹತ್ ಬದಲಾವಣೆ ಕಾಣಲಿದೆ‘ ಎಂದುವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋವಾ ಅಭಿಪ್ರಾಯ ವ್ಯಕ್ತಪಡಿಸಿದರು.
ಜೋದ್ಪುರದಲ್ಲಿ ನಡೆಯುತ್ತಿರುವ ಭಾರತ ಹಾಗು ರಷ್ಯಾ ವಾಯುಪಡೆಗಳ ನಡುವಿನಜಂಟಿ ಸಮರಾಭ್ಯಾಸವನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಅವರುಮಾತನಾಡಿದರು.
ಈ ಹಿಂದೆಯೂ ರಫೇಲ್ ಒಪ್ಪಂದವನ್ನು ಸಮರ್ಥಿಸಿಕೊಂಡಿದ್ದ ಧನೋವಾ ಅವರು ಈಗ ಅದನ್ನೇ ಪುನರುಚ್ಛರಿಸಿದ್ದಾರೆ. ರಕ್ಷಣಾ ಖರೀದಿಯ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಈ ಹಿಂದೆ ಬೋಫೋರ್ಸ್ ವಿಚಾರದಲ್ಲೂ ಹೀಗೆ ಆಗಿದ್ದರಿಂದ ಖರೀದಿ ವಿಳಂಬವಾಯಿತು ಎಂದು ಹೇಳಿದರು.
’ಸುಪ್ರೀಂಕೋರ್ಟ್ ಉತ್ತಮ ತೀರ್ಪು ನೀಡಿದ್ದು, ನಾನು ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ, ಸದ್ಯಕ್ಕೆ ವಾಯುಸೇನೆಗೆ ರಫೇಲ್ ಯುದ್ಧ ವಿಮಾನದ ಅಗತ್ಯ ಹೆಚ್ಚಿದೆ. ರಫೇಲ್ ಯುದ್ಧ ವಿಮಾನದ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆಯಾವುದೇ ಅಪಸ್ವರವಿಲ್ಲ‘ ಎಂದರು.
ಬಳಕೆಗೆ ಸಿದ್ಧವಿರುವ ರಫೇಲ್ ಯುದ್ಧ ವಿಮಾನದ ಮೌಲ್ಯವನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎನ್ನುವ ವಿಚಾರದಲ್ಲಿ ಸರ್ಕಾರಕ್ಕೆ ಬೆಂಬಲವಾಗಿ ನಿಂತಿರುವ ಧನೋವಾ ಅವರು, ’ಒಂದು ವೇಳೆ ವಿಮಾನದ ಮೌಲ್ಯವನ್ನು ಪ್ರಕಟಿಸಿದರೆ ಶತ್ರುಗಳು ನಮ್ಮ ಬಳಿಯಿರುವ ವಿಮಾನದ ಸಾಮಾರ್ಥ್ಯವನ್ನು ತಿಳಿಯುವ ಸಾಧ್ಯತೆ ಇದೆ‘ ಎಂದು ತಿಳಿದರು.
’ತೆರಿಗೆದಾರರಿಗೆ ತಮ್ಮ ಹಣ ಎಲ್ಲಿ ಹೋಗಿದೆ ಎಂದು ತಿಳಿದುಕೊಳ್ಳುವ ಎಲ್ಲಾ ಹಕ್ಕು ಇದೆ. ಜನರಿಂದ ಸಂಗ್ರಹವಾದ ತೆರಿಗೆ ಹಣ ಸರಿಯಾದ ರೀತಿಯಲ್ಲಿ ಬಳಕೆಯಾಗಿದೆ ಎನ್ನುವುದನ್ನು ಖಚಿತಪಡಿಸುವುದಕ್ಕಾಗಿಯೇ ಮಹಾಲೇಖಪಾಲರು (ಸಿಎಜಿ) ಇದ್ದಾರೆ‘ ಎಂದು ವಿವರಿಸಿದರು.