ಲಖನೌ:‘ಅಯೋಧ್ಯೆಯಲ್ಲಿ ಭಾನುವಾರ ನಡೆಯಲಿರುವ ‘ಧರ್ಮಸಭೆ’ಯಲ್ಲಿ ಭಾಗವಹಿಸುವ ರಾಮಭಕ್ತರು ರಾಮಲಲ್ಲಾನ ದರ್ಶನವನ್ನು ಪಡೆದೇ ಪಡೆಯುತ್ತಾರೆ’ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಹೇಳಿದೆ.
‘500ಕ್ಕೂ ಹೆಚ್ಚು ಸಾಧುಸಂತರು ಧರ್ಮಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜಕಾರಣಿಗಳನ್ನು ನಾವು ವೇದಿಕೆಯಿಂದ ದೂರ ಇಡುತ್ತೇವೆ. ಲಕ್ಷಾಂತರ ರಾಮಭಕ್ತರು ಅಯೋಧ್ಯೆಯಲ್ಲಿ ಸೇರಲಿದ್ದಾರೆ. 1992ರಲ್ಲಿ ಇಲ್ಲಿ ಸೇರಿದ್ದಕ್ಕಿಂತಲೂ ಹೆಚ್ಚಿನ ಜನರು ಈ ಬಾರಿ ಬರಲಿದ್ದಾರೆ. ಅಯೋಧ್ಯೆಯಲ್ಲಿ ಅಂದು ನೀವು ‘ಮಾನವತೆಯ ಸಾಗರ’ವನ್ನು ನೋಡಲಿದ್ದೀರಿ’ ಎಂದು ವಿಎಚ್ಪಿಯ ವಕ್ತಾರ ಶರದ್ ಶರ್ಮಾ ಹೇಳಿದ್ದಾರೆ.
ಇದರ ಬೆನ್ನಲ್ಲೇ ರಾಮನ ತಾತ್ಕಾಲಿಕ ದೇವಾಲಯದ ಸಂಕೀರ್ಣದಲ್ಲಿ ನಗರಾಡಳಿತವು ನಿಷೇದಾಜ್ಞೆ ಜಾರಿಗೊಳಿಸಿದೆ. ‘ವಿವಾದಿತ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದಿರುವ ಸುಪ್ರೀಂ ಕೋರ್ಟ್ನ ಆದೇಶವನ್ನು ಪಾಲಿಸುತ್ತೇವೆ. ಎಂತಹದ್ದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ’ ಎಂದು ನಗರಾಡಳಿತವು ಹೇಳಿದೆ.
ಮೊದಲು ಮಂದಿರ, ನಂತರ ಸರ್ಕಾರ
ಅಯೋಧ್ಯೆಯಲ್ಲಿ ಶೀಘ್ರವೇ ರಾಮಮಂದಿರವನ್ನು ನಿರ್ಮಿಸಬೇಕು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಒತ್ತಾಯಿಸಿದ್ದಾರೆ.
‘ರಾಮಮಂದಿರ ನಿರ್ಮಿಸುತ್ತೇವೆ ಎಂದು ನೀಡಿದ್ದ ಭರವಸೆಯನ್ನು ಈ ಸರ್ಕಾರ ಕಡೆಗಣಿಸಿದೆ. ಹೀಗಾಗಿ2019ರ ಚುನಾವಣೆಗೂ ಮುನ್ನ ರಾಮಮಂದಿರ ನಿರ್ಮಾಣವಾಗಬೇಕು’ ಎಂದು ಅವರು ಹೇಳಿದ್ದಾರೆ.
‘ಹರ್ ಹಿಂದೂ ಕಿ ಯಹೀ ಪುಕಾರ್. ಫಹೆಲೆ ಮಂದಿರ್, ಫಿರ್ ಸರ್ಕಾರ್ (ಮೊದಲು ಮಂದಿರ, ನಂತರ ಸರ್ಕಾರ. ಪ್ರತಿಯೊಬ್ಬ ಹಿಂದೂವಿನ ಕೂಗೂ ಇದೆ)’ ಎಂದು ಅವರು ಘೋಷಣೆ ಕೂಗಿದ್ದಾರೆ.
ಅಯೋಧ್ಯೆಗೆ ಶಿವನೇರಿ ಮಣ್ಣು
‘ನವೆಂಬರ್ 24 ಮತ್ತು 25ರಂದು ಉದ್ಧವ್ ಠಾಕ್ರೆ ಅವರು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಛತ್ರಪತಿ ಶಿವಾಜಿಯ ಜನ್ಮಸ್ಥಳವಾದ ಶಿವನೇರಿ ಕೋಟೆಯ ಮಣ್ಣನ್ನು ಠಾಕ್ರೆ ಅವರು ಅಯೋಧ್ಯೆಗೆ ಕೊಂಡೊಯ್ಯಲಿದ್ದಾರೆ’ ಎಂದು ಮೂಲಗಳು ಹೇಳಿವೆ.