ನವದೆಹಲಿ: ತಮಿಳುನಾಡಿನ ರಾಯಪುರಂನ ಸರ್ಕಾರಿ ಮಕ್ಕಳ ಸಂರಕ್ಷಣಾ ಗೃಹದ 35 ಮಕ್ಕಳಿಗೆ ಕೋವಿಡ್ ದೃಢಪಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಉಳಿದ ಮಕ್ಕಳ ಸುರಕ್ಷತೆಗೆ ತೆಗೆದುಕೊಂಡ ಕ್ರಮಗಳು ಸೇರಿದಂತೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಗುರುವಾರ ಸೂಚಿಸಿದೆ.
ಸಾಂಕ್ರಾಮಿಕ ಪಿಡುಗು ವಸತಿಗೃಹಗಳಿಗೆ ಪಸರಿಸದಂತೆ ತಡೆಯಲು ವಿವಿಧ ರಾಜ್ಯ ಸರ್ಕಾರಗಳು ತೆಗೆದುಕೊಂಡ ಕ್ರಮಗಳನ್ನು ವಿವರಿಸುವಂತೆ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್, ಕೃಷ್ಣ ಮುರಾರು ಹಾಗೂ ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ಪೀಠ ಸೂಚಿಸಿತು.
ನಿರಾಶ್ರಿತರ ವಸತಿ ಗೃಹಗಳ ಮಕ್ಕಳ ಸುರಕ್ಷತೆ ಕುರಿತ ಪ್ರಶ್ನಾವಳಿಗಳನ್ನು ಎಲ್ಲ ಹೈಕೋರ್ಟ್ಗಳ ಬಾಲನ್ಯಾಯ ಸಮಿತಿಗಳು ಆಯಾ ರಾಜ್ಯ ಸರ್ಕಾರಗಳಿಗೆ ಕಳುಹಿಸಿ ಪ್ರತಿಕ್ರಿಯೆ ಪಡೆದುಕೊಳ್ಳಲಿವೆ ಎಂದು ಕೋರ್ಟ್ ತಿಳಿಸಿತು.
ಏಪ್ರಿಲ್ 3ರಂದು ಸ್ವಯಂ ಪ್ರೇರಿತರವಾಗಿ ಪ್ರಕರಣ ಕೈಗೆತ್ತಿಕೊಂಡಿದ್ದ ಕೋರ್ಟ್, ದೇಶದಾದ್ಯಂತ ಇರುವ ಬಾಲಾಪರಾಧಿ ಗೃಹ, ವಸತಿಗೃಹಗಳು, ಅನಾಥಾಶ್ರಮದ ಮಕ್ಕಳ ಸುರಕ್ಷತೆ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು.
ಬಾಲಾಪರಾಧಿ ಗೃಹಗಳಲ್ಲಿ ಇರುವ ಮಕ್ಕಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸಾಧ್ಯವೇ ಎಂಬುದನ್ನು ತುರ್ತಾಗಿ ಪರಿಗಣಿಸುವಂತೆ ಬಾಲ ನ್ಯಾಯಮಂಡಳಿಗಳಿಗೆ (ಜೆಜೆಬಿ) ಕೋರ್ಟ್ ಇದೇ ವೇಳೆ ಸೂಚಿಸಿತು.
ಅನಾಥಾಶ್ರಮ ಹಾಗೂ ಬಾಲಾಪರಾಧಿ ಗೃಹಗಳಿಂದ ಮನೆಗೆ ಮರಳಿರುವ ಮಕ್ಕಳ ಜೊತೆ ದೂರವಾಣಿ ಮೂಲಕ ಸಂಪರ್ಕ ಸಾಧಿಸಿ, ಅವರ ಮೇಲೆ ನಿಗಾ ಇರಿಸುವಂತೆ ದೇಶದಾದ್ಯಂತ ಇರುವ ಮಕ್ಕಳ ಕಲ್ಯಾಣ ಸಮಿತಿಗಳಿಗೆ ನಿರ್ದೇಶನ ನೀಡಿತು.