ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಮತ್ತು ವಲಸೆ ಕಾರ್ಮಿಕರ ನೋವಿಗೆ ಸ್ಪಂದಿಸಲು ಒತ್ತಾಯಿಸಿ ಕಾಂಗ್ರೆಸ್ ಅಭಿಯಾನ

Last Updated 28 ಮೇ 2020, 11:42 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿನ ವಲಸೆ ಕಾರ್ಮಿಕರು ಮತ್ತು ಬಡವರ ಸಂಕಷ್ಟಗಳ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ನ ಹಿರಿಯ ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನವನ್ನುಆರಂಭಿಸಿದ್ದಾರೆ.

#SpeakUpIndia ಎಂಬ ಈ ಅಭಿಯಾನದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಬಡವರ ಮತ್ತು ವಲಸೆ ಕಾರ್ಮಿಕರನ್ನು ಮೋದಿ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಇದೇ ಮೊದಲ ಬಾರಿ ಇಷ್ಟೊಂದು ನೋವು, ಸಂಕಷ್ಟ ಅನುಭವಿಸಿದ್ದು. ಲಕ್ಷಗಟ್ಟಲೆ ಕಾರ್ಮಿಕರು ಅನ್ನ, ನೀರು ಸಿಗದೆ ಬರಿಗಾಲಲ್ಲಿ ನಡೆಯುತ್ತಿದ್ದಾರೆ. ಅವರಿಗೆ ಔಷಧಿ ಸಿಗುತ್ತಿಲ್ಲ ಆದರೂ ಮನೆ ಸೇರಲು ಅವರು ಸಾವಿರ ಕಿಮೀಗಳಷ್ಟು ನಡೆಯಲೇ ಬೇಕಾಗಿದೆ. ಅವರ ನೋವು, ದುಃಖವನ್ನು ಇಡೀ ದೇಶ ಕಂಡಿದೆ ಆದರೆ ಸರ್ಕಾರಕ್ಕೆ ಮಾತ್ರ ಕಾಣುತ್ತಿಲ್ಲ ಎಂದು ಸೋನಿಯಾ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಹಾಗಾಗಿ ಭಾರತದ ಜನರ ದನಿ ಗಟ್ಟಿಯಾಗಿ ಕೇಳಿಸುವಂತೆ ಮಾಡಲು ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನವನ್ನು ಆರಂಭಿಸಿದ್ದೇವೆ.ಕೇಂದ್ರ ಸರ್ಕಾರ ತಮ್ಮ ಖಜಾನೆ ತೆರೆದು ಅಗತ್ಯವಿರುವವರಿಗೆ ಸಹಾಯ ನೀಡಬೇಕು ಎಂದು ಒತ್ತಾಯಿಸುತ್ತಿದ್ದೇನೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಸಂಕಷ್ಟದಲ್ಲಿರುವ ಬಡವರಿಗೆ ಮುಂದಿನ 6 ತಿಂಗಳುಗಳವರೆಗೆ ಪ್ರತಿ ದಿನ ₹7,500 ಹಣ ವರ್ಗಾವಣೆ ಮಾಡಿ ಎಂದು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯಿಸಿದ್ದಾರೆ.

ಮನೆಗೆ ಸುರಕ್ಷಿತವಾಗಿ ತಲುಪಲು ಎಲ್ಲ ವಲಸೆ ಕಾರ್ಮಿಕರಿಗೆ ವಾಹನದ ವ್ಯವಸ್ಥೆ ಮಾಡಿಕೊಡಬೇಕು. ಮನರೇಗಾದಲ್ಲಿ ಕೆಲಸದ ದಿನವನ್ನು 200 ಆಗಿ ಏರಿಕೆ ಮಾಡಿ. ಬಡವರಿಗೆ ಮತ್ತು ಸಣ್ಣ ಕೈಗಾರಿಕೆಗಳಿಗೆ ಬೆಂಬಲ ನೀಡಲು ತಕ್ಷಣ ₹10,000 ಆರ್ಥಿಕ ಪ್ಯಾಕೇಜ್ ನೀಡಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಮುಖ್ಯಮಂತ್ರಿಗಳಾದ ಭೂಪೇಶ್ ಬಘೇಲ್, ವಿ.ನಾರಾಯಣ ಸ್ವಾಮಿ ಮತ್ತು ಅಮರಿಂದರ್ ಸಿಂಗ್ ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಸಂದೇಶ ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT