ಸುಪ್ರೀಂ ಕೋರ್ಟ್: ಸಾಲುಗಟ್ಟಿವೆ ಮಹತ್ವದ ತೀರ್ಪುಗಳು

ಇತ್ತೀಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಹಲವು ಮಹತ್ವದ ತೀರ್ಪುಗಳನ್ನು ನೀಡಿದೆ. ಖಾಸಗಿತನದ ಹಕ್ಕು ಮತ್ತು ತ್ರಿವಳಿ ತಲಾಖ್ ರದ್ದತಿ ಅಂತಹ ಕೆಲವು ತೀರ್ಪುಗಳು. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಅವಧಿ ಪೂರ್ಣಗೊಳ್ಳುವ ಮೊದಲು ಇನ್ನೂ ಹಲವು ಮಹತ್ವದ ತೀರ್ಪುಗಳು ಪ್ರಕಟವಾಗುವ ನಿರೀಕ್ಷೆ ಇದೆ. ಅಕ್ಟೋಬರ್ 2ರಂದು ಮಿಶ್ರಾ ನಿವೃತ್ತರಾಗಲಿದ್ದಾರೆ.
ಆಧಾರ್: ವಿಶಿಷ್ಟ ಗುರುತು ಸಂಖ್ಯೆ ಯೋಜನೆಯನ್ನು (ಆಧಾರ್) ಪ್ರಶ್ನಿಸಿ ಸಲ್ಲಿಕೆಯಾಗಿರುವ 27 ಅರ್ಜಿಗಳ ವಿಚಾರಣೆ ಮುಗಿದಿದೆ. ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ವಿಚಾರಣೆ ಪೂರ್ಣಗೊಳಿಸಿದೆ. ತೀರ್ಪು ಕಾಯ್ದಿರಿಸಲಾಗಿದೆ. ಖಾಸಗಿತನವನ್ನು ಎತ್ತಿ ಹಿಡಿದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರಿಂದಾಗಿ ಆಧಾರ್ ತೀರ್ಪಿನ ಬಗ್ಗೆಯೂ ಕುತೂಹಲ ಮೂಡಿದೆ.
ಬಾಬರಿ ಮಸೀದಿ: ಅಯೋಧ್ಯೆಯ ವಿವಾದಿತ ನಿವೇಶನವನ್ನು ಮೂರಾಗಿ ವಿಭಜಿಸಿ ನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಸುನ್ನಿ ವಕ್ಫ್ ಮಂಡಳಿಗೆ ಹಂಚಿಕೆ ಮಾಡಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಮಸೀದಿಯು ಇಸ್ಲಾಂಗೆ ಅಂತರ್ಗತ ವಿಚಾರವೇ ಎಂಬ ಪ್ರಶ್ನೆಗೆ ಮಿಶ್ರಾ ನೇತೃತ್ವದ ಪೀಠವು ಉತ್ತರ ಕಂಡುಕೊಳ್ಳಲಿದೆ. ಇದರ ಆಧಾರದಲ್ಲಿಯೇ ಅಯೋಧ್ಯೆಯ ವಿವಾದಾತ್ಮಕ ನಿವೇಶನ ಪ್ರಕರಣ ಇತ್ಯರ್ಥವಾಗಲಿದೆ.
ಶಬರಿಮಲೆಗೆ ಮಹಿಳೆಯರ ಪ್ರವೇಶ: ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ಅವಕಾಶಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಪೂರ್ಣಗೊಂಡಿದೆ. ಸಮಾಜದ ಪುರುಷ ಪ್ರಧಾನ ಗ್ರಹಿಕೆಯೇ ಮಹಿಳೆಯರಿಗೆ ಪ್ರವೇಶ ನಿಷೇಧಕ್ಕೆ ಕಾರಣ ಎಂದು ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.
ಜನಪ್ರತಿನಿಧಿಗಳ ವಕೀಲಿ ವೃತ್ತಿ: ಸಂಸದ ಅಥವಾ ಶಾಸಕರಾಗಿ ಆಯ್ಕೆಯಾಗುವ ವಕೀಲರು ತಮ್ಮ ವೃತ್ತಿ ಮುಂದುವರಿಸಬಹುದೇ ಎಂಬ ಅರ್ಜಿಯ ವಿಚಾರಣೆಯೂ ಪೂರ್ಣಗೊಂಡಿದೆ. ಸಂಸದ ಅಥವಾ ಶಾಸಕ ಜನಪ್ರತಿನಿಧಿಯೇ ಹೊರತು ಸರ್ಕಾರದ ಪೂರ್ಣಾವಧಿ ನೌಕರ ಅಲ್ಲ ಎಂದು ವಿಚಾರಣೆ ಸಂದರ್ಭದಲ್ಲಿ ಸರ್ಕಾರ ಹೇಳಿತ್ತು.
ವ್ಯಭಿಚಾರಕ್ಕೆ ಶಿಕ್ಷೆಯಲ್ಲಿ ಲಿಂಗ ತಾರತಮ್ಯ: ವ್ಯಭಿಚಾರಕ್ಕೆ ಸಂಬಂಧಿಸಿ ಭಾರತೀಯ ದಂಡ ಸಂಹಿತೆಯಲ್ಲಿ ಇರುವ ಕೆಲವು ಅಂಶಗಳನ್ನು ಮಿಶ್ರಾ ನೇತೃತ್ವದ ಸಂವಿಧಾನ ಪೀಠವು ಪರಿಶೀಲನೆಗೆ ಒಳಪಡಿಸಿದೆ. ಸಂಹಿತೆಯಲ್ಲಿರುವ ಕೆಲವು ಅಂಶಗಳು ಮಹಿಳಾ ವಿರೋಧಿ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಮುಂದಿನ 20 ದಿನಗಳಲ್ಲಿ ಇವು ಸೇರಿ ಹಲವು ಮಹತ್ವದ ಪ್ರಕರಣಗಳ ತೀರ್ಪು ಬರುವ ನಿರೀಕ್ಷೆ ಇದೆ.
**
ಸಂಬಂಧಪಟ್ಟ ಲೇಖನಗಳು
‘ಲಿಂಗತ್ವ ಅಲ್ಪಸಂಖ್ಯಾತರಿಗೆ ನೈಜ ಸ್ವಾತಂತ್ರ್ಯ’
‘ಸಮಾನತೆಯ ಲೈಂಗಿಕ ಹಕ್ಕು ಸಿಕ್ಕಿದೆ’
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.