ಕೃಷ್ಣಗಿರಿ (ತಮಿಳುನಾಡು): ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಲವು ದಶಕಗಳಕಾಲ ಭೀತಿ ಹುಟ್ಟಿಸಿದ್ದ ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾ ರಾಣಿ ಕೃಷ್ಣಗಿರಿ ಜಿಲ್ಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸೇರಿದ್ದಾರೆ.
ಇವರೊಂದಿಗೆ ಪಾಟ್ರಾಳಿ ಮಕ್ಕಳ್ ಕಚ್ಚಿಯ 1000ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರಳಿಧರ ರಾವ್ ನೇತೃತ್ವದಲ್ಲಿ ಪಕ್ಷ ಸೇರಿದರು.
Tamil Nadu: Vidhya Rani - daughter of Veerappan, joined BJP in Krishnagiri yesterday, in the presence of party leaders Murlidhar Rao, Pon Radhakrishnan and others. pic.twitter.com/O1TJKGbrMi
‘ವೃತ್ತಿಯಿಂದ ವಕೀಲೆಯಾಗಿರುವ, ಸಾಮಾಜಿಕ ಹೋರಾಟಗಾರ್ತಿಯೂ ಆಗಿರುವ ವಿದ್ಯಾರಾಣಿ ತಮ್ಮ ನಿರ್ಧಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ‘ಮೋದಿ ಅವರ ಕಾರ್ಯ ಶೈಲಿಗೆ ನಾನು ಮನಸೋತಿದ್ದೇನೆ. ಅವರ ಸ್ಫೂರ್ತಿಯಿಂದಲೇ ನಾನು ಬಿಜೆಪಿ ಸೇರಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
‘ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರನ್ನು ಎರಡು ವರ್ಗಳ ಹಿಂದೆ ಭೇಟಿ ಮಾಡಿದ್ದೆ. ಆಗ ಅವರು ನನ್ನನ್ನು ಬಿಜೆಪಿ ಸೇರಿ ಜನರ ಸೇವೆ ಮಾಡುವಂತೆ ತಿಳಿಸಿದ್ದರು. ಹೀಗಾಗಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದೂ ಅವರು ತಿಳಿಸಿದ್ದರು.
‘ಜಾತಿ ಧರ್ಮಗಳನ್ನೂ ಮೀರಿ ಜನರಿಗೆ ಶಿಕ್ಷಣ ನೀಡುವ ಮೂಲಕ ಅವರನ್ನು ಮೇಲೆತ್ತಬೇಕು’ ಎಂದು ವಿದ್ಯಾರಾಣಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಸಮಾಜದ ಎಲ್ಲ ಸ್ತರದ ವಿದ್ಯಾರ್ಥಿಗಳಿಗೂ ತಾವು ಕೃಷ್ಣಗಿರಿಯಲ್ಲಿ ಟುಟೋರಿಯಲ್ ನಡೆಸುತ್ತಿರುವುದಾಗಿ ಹೇಳಿದ್ದಾರೆ.
‘ವಿದ್ಯಾರಾಣಿ ಅವರ ಸೇವೆಯನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳಲಿದ್ದೇವೆ. ಪಕ್ಷದಲ್ಲಿ ಆಕೆಯ ಸ್ಥಾನಮಾನವನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು’ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಕೆ.ಎಸ್ ನರೇಂದ್ರನ್ ತಿಳಿಸಿದ್ದಾರೆ.