ಬೆಂಗಳೂರು: ನಗರದ ಮಾನ್ಯತಾ ಟೆಕ್ ಪಾರ್ಕ್ ಬಳಿ ಭಾನುವಾರ ಅಪಘಾತ ಸಂಭವಿಸಿದ್ದು, ಹೊಸಕೋಟೆ ವಿಭಾಗದ ಡಿವೈಎಸ್ಪಿ ಎನ್.ಬಿ. ಸಕ್ರಿ ಗಾಯಗೊಂಡಿದ್ದಾರೆ.
‘ಸಕ್ರಿ ಅವರು ಹೆಬ್ಬಾಳದಲ್ಲಿರುವ ಮನೆಯಿಂದ ಹೊಸಕೋಟೆಯಲ್ಲಿರುವ ತಮ್ಮ ಕಚೇರಿಗೆ ಪೊಲೀಸ್ ವಾಹನದಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಚಿಕ್ಕಜಾಲ ಸಂಚಾರ ಪೊಲೀಸರು ತಿಳಿಸಿದರು.
‘ಚಾಲಕ ಹಾಗೂ ಸಕ್ರಿ ವಾಹನದಲ್ಲೇ ಸಿಲುಕಿಕೊಂಡಿದ್ದರು. ಅವರಿಬ್ಬರನ್ನು ಸ್ಥಳೀಯರು ವಾಹನದಿಂದ ಹೊರಗೆ ತಂದು ರಕ್ಷಿಸಿದ್ದಾರೆ. ಸಕ್ರಿ ಅವರ ಎಡ ಕೈಗೆ ಗಾಯವಾಗಿದೆ. ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ’ ಎಂದೂ ಹೇಳಿದರು.