ಶಿರಸಿ: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹೊನ್ನಾವರ ತಾಲ್ಲೂಕು ಮಂಕಿಯಲ್ಲಿ ಮಾಡಿದ್ದ ಭಾಷಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಪ್ರಕರಣದ ತನಿಖಾಧಿಕಾರಿ, ಪಿಎಸ್ಐ ನೀತು ಗೂಡೆ ಎದುರು ಸೋಮವಾರ ಹಾಜರಾಗಿ, ಹೇಳಿಕೆ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಚುನಾವಣೆಯನ್ನು ಕೂಡ ಕಾಂಗ್ರೆಸ್ ಪಕ್ಷವೇ ಮಾಡಿ ಮುಗಿಸುವ ಸ್ಥಿತಿಗೆ ಬಂದಿದೆ. ಹಳೆಯ ಭಾಷಣವನ್ನು ಮುಂದಿಟ್ಟು ನನ್ನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಯಾವಾಗಲೋ ಮಾಡಿದ್ದ ಭಾಷಣಕ್ಕೆ ಇನ್ಯಾವಾಗಲೋ ಪ್ರಕರಣ ದಾಖಲಿಸುವ ಪೂರ್ವಗ್ರಹಪೀಡಿತ ಇಂದಿನ ಸರ್ಕಾರ, ಈಗ ಮತ್ತೊಮ್ಮೆ ನನ್ನನ್ನು ಗುರಿಯಾಗಿಸಲು ಹೊರಟಿದೆ. ಹಳೆಯ ಪ್ರಕರಣಗಳಿಗೆ ಜೀವ ನೀಡುತ್ತಿದೆ’ ಎಂದರು.