ಕಾಳ್ಗಿಚ್ಚು: ಮಣ್ಣಿನಲ್ಲಿರುವ ಸೂಕ್ಷ್ಮಾಣುಜೀವಿಗಳು ನಾಶ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಳ್ಗಿಚ್ಚಿಗೆ ಆಹುತಿಯಾಗಿರುವ 15 ಸಾವಿರ ಎಕರೆ ಅರಣ್ಯ ಪ್ರದೇಶ ಮತ್ತೆ ಸಹಜ ಸ್ಥಿತಿಗೆ ಬರಲು ಏಳೆಂಟು ವರ್ಷಗಳೇ ಬೇಕು ಎಂಬ ಅಭಿಪ್ರಾಯವನ್ನು ವನ್ಯಜೀವಿ ತಜ್ಞರು ವ್ಯಕ್ತಪಡಿಸಿದ್ದಾರೆ.
ಬೆಂಕಿಯಿಂದಾಗಿ ಮಣ್ಣಿನ ಸತ್ವ ಅಥವಾ ಅದರ ಆರೋಗ್ಯಕ್ಕೆ ತೀವ್ರ ಘಾಸಿಯಾಗುತ್ತದೆ. ಮತ್ತೆ ಆರೋಗ್ಯಯುತವಾಗಲು ದೀರ್ಘ ಸಮಯ ತೆಗೆದುಕೊಳ್ಳುತ್ತದೆ ಎಂಬುದು ಅವರ ವಾದ.
ಬಂಡೀಪುರದಲ್ಲಿ ಕಂಡು ಬಂದಿರುವ ಕಾಳ್ಗಿಚ್ಚು ಬಹುತೇಕ ಪ್ರದೇಶಗಳಲ್ಲಿ ನೆಲ ಬೆಂಕಿ (ಗ್ರೌಂಡ್ ಫೈರ್) ಆಗಿರುವುದರಿಂದ ವನ್ಯ ಪ್ರಾಣಿಗಳ ಜೀವಕ್ಕೆ ತೊಂದರೆಯಾಗಿಲ್ಲ. ಸುಟ್ಟಿರುವ ಹೆಚ್ಚಿನ ಕಡೆಗಳಲ್ಲಿ ಹಸಿ ಮರಗಳಿಗೂ ದೊಡ್ಡ ಮಟ್ಟಿನ ಹಾನಿಯಾಗಿಲ್ಲ. ಹಾಗಿದ್ದರೂ, ಅರಣ್ಯದ ಜೈವಿಕ ವ್ಯವಸ್ಥೆಗೆ ಧಕ್ಕೆ ಉಂಟಾಗಿದೆ ಎಂದು ಹೇಳುತ್ತಾರೆ ತಜ್ಞರು.
‘ಪ್ರಾಣಿಗಳ ಜೀವಹಾನಿಯಾಗಿಲ್ಲ ಎಂದು ಅರಣ್ಯ ಅಧಿಕಾರಿಗಳು ಹಾಗೂ ಕಾಡಂಚಿನ ಗ್ರಾಮಸ್ಥರು ನಿಟ್ಟುಸಿರುವ ಬಿಡುವ ಹಾಗಿಲ್ಲ. ಯಾಕೆಂದರೆ, ಮಣ್ಣಿನಲ್ಲಿರುವ ಸೂಕ್ಷ್ಮಾಣುಜೀವಿಗಳು ಬೆಂಕಿಗೆ ಸುಟ್ಟು ಹೋಗಿರುತ್ತವೆ. ಮಣ್ಣಿನ ಆರೋಗ್ಯ ಕಾಪಾಡುವಲ್ಲಿ ಇವು ಅತ್ಯಂತ ಮುಖ್ಯಪಾತ್ರ ವಹಿಸುತ್ತವೆ’ ಎಂದು ಹಿರಿಯ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ್ ಹೇಳುತ್ತಾರೆ.
‘ವೈಜ್ಞಾನಿಕ ವರದಿಗಳ ಪ್ರಕಾರ ಅರಣ್ಯಕ್ಕೆ ಒಂದು ಬಾರಿ ಬೆಂಕಿ ಬಿದ್ದರೆ, ಅದು ಕಾಡಿನ ಏಳು ವರ್ಷಗಳ ಬೆಳವಣಿಗೆಯನ್ನು ಸ್ಥಗಿತಗೊಳಿಸುತ್ತದೆ. ಮಣ್ಣಿನಲ್ಲಿ ಸತ್ವ ಇಲ್ಲದಿದ್ದರೆ ಅಲ್ಲಿ ಏನೂ ಬೆಳೆಯುವುದಿಲ್ಲ. ನೆಲದಲ್ಲಿ ಸೂಕ್ಷ್ಮಾಣುಜೀವಿಗಳು ಸಕ್ರಿಯವಾಗಿದ್ದರೆ, ಮಣ್ಣಿನ ಆರೋಗ್ಯ ಉತ್ತಮವಾಗಿರುತ್ತದೆ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
* ಕಾಳ್ಗಿಚ್ಚಿನ ಪರಿಣಾಮ ಕಣ್ಣಿಗೆ ಕಾಣುವುದಿಲ್ಲ. ಕಾಡು ತನ್ನ ಮೂಲ ಗುಣ ಕಳೆದುಕೊಳ್ಳುತ್ತದೆ. ಪರೋಕ್ಷವಾಗಿ ಅದು ಜೀವ ಸಂಕುಲದ ಮೇಲೆ ಪರಿಣಾಮ ಬೀರುತ್ತದೆ
-ಕೃಪಾಕರ್, ವನ್ಯಜೀವಿ ಛಾಯಾಗ್ರಾಹಕ
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.