ಬೆಂಗಳೂರು: ಬೇರೆ ರಾಜ್ಯಗಳಿಂದ ಬರುವವರು ‘ಸೇವಾ ಬಂಧು‘ ಆ್ಯಪ್ನಲ್ಲಿ ನೋಂದಾಯಿಸಿರಬೇಕು ಮತ್ತು ಎರಡು ರಾಜ್ಯಗಳ ಪರವಾನಗಿ ಪಡೆಯುವುದು ಕಡ್ಡಾಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗೃಹ ಇಲಾಖೆ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರು ಮತ್ತು ಇತರ ಹಿರಿಯ ಅಧಿಕಾರಿಗಳ ಜತೆ ಬುಧವಾರ ವಿಡಿಯೊ ಸಂವಾದ ನಡೆಸಿದ ಅವರು ಈ ಸೂಚನೆ ನೀಡಿದರು.
‘ಕೇಂದ್ರ ಸರ್ಕಾರದ ಮಾರ್ಗಸೂಚಿಯ ಅನ್ವಯ ಅಂತರ ರಾಜ್ಯಗಳಿಂದ ಪರವಾನಗಿ ಇಲ್ಲದೇ ಬರುವ ವಾಹನಗಳನ್ನು ನಿಷೇಧಿಸಬೇಕು. ನಮ್ಮ ರಾಜ್ಯದಿಂದ ಬೇರೆ ರಾಜ್ಯಗಳಿಗೆ ಹೋಗಬೇಕಾಗಿರುವ ಜನರಿಗೆ ಸರ್ಕಾರದ ಸೂಚನೆಯಂತೆ ಪರವಾನಗಿ ನೀಡುವುದನ್ನು ನಿಯಂತ್ರಿಸಬೇಕು’ ಎಂದೂ ಬೊಮ್ಮಾಯಿ ಸೂಚಿಸಿದರು.
ಕಂಟೇನ್ಮೆಂಟ್ ಮತ್ತು ಬಫರ್ ವಲಯಗಳನ್ನು ಕಟ್ಟುನಿಟ್ಟಾಗಿ ನಿಭಾಯಿಸಬೇಕು. ಇತರೆ ಪ್ರದೇಶಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ವಾಹನ ಮತ್ತು ಜನರ ಓಡಾಟವನ್ನು ನಿಷೇಧಿಸುವ ಕುರಿತು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ಹೇಳಿದರು.
ನೆಗೆಟಿವ್ ಫಲಿತಾಂಶ: ಸುದ್ದಿವಾಹಿನಿಯೊಂದರ ಕ್ಯಾಮೆರಾಮನ್ ಒಬ್ಬರಲ್ಲಿ ಕೋವಿಡ್ ಪಾಸಿಟಿವ್ ಬಂದಿದ್ದರಿಂದಾಗಿ, ಅವರ ಸಂಪರ್ಕಕ್ಕೆ ಬಂದಿದ್ದ ಬೊಮ್ಮಾಯಿ ಅವರು ಸ್ವಯಂ ಪ್ರೇರಣೆಯ ಗೃಹ ಕ್ವಾರಂಟೈನ್ಗೆ ಒಳಗಾಗಿದ್ದರು.
‘ಎರಡನೇ ಬಾರಿ ಪರೀಕ್ಷೆ ಮಾಡಿಸಿಕೊಂಡಾಗಲೂ ವರದಿ ನೆಗೆಟಿವ್ ಬಂದಿದೆ. 14 ದಿನ ಕ್ವಾರಂಟೈನ್ ಅವಧಿ ಮುಗಿದಿದೆ’ ಎಂದು ಅವರು ತಿಳಿಸಿದ್ದಾರೆ.