ಹುಬ್ಬಳ್ಳಿ: ರಾಜ್ಯ ಪಾನೀಯ ನಿಗಮದ(ಕೆಎಸ್ಬಿಸಿಎಲ್) ವಿವಿಧ ಡಿಪೊಗಳಲ್ಲಿ 2019–20ನೇ ಸಾಲಿನಲ್ಲಿ ಅವಧಿ ಮುಗಿದ 1,27,814 ಕೇಸ್ ಬಿಯರ್ ಹಾಳಾಗಿವೆ. ಇದರಿಂದ ಬಿಯರ್ ತಯಾರಿಕಾ ಕಂಪನಿಗಳಿಗೆ ಅಂದಾಜು ₹25 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ಲಾಕ್ಡೌನ್ ಅವಧಿಯಲ್ಲೇ (ಮಾರ್ಚ್, ಏಪ್ರಿಲ್)ಅಂದಾಜು ₹8 ಕೋಟಿ ಮೌಲ್ಯದ 42 ಸಾವಿರ ಕೇಸ್ ಬಿಯರ್ನ ಅವಧಿ ಮುಗಿದಿವೆ.
ರಾಜ್ಯದಲ್ಲಿರುವ 71 ಪಾನೀಯ ನಿಗಮದ ಡಿಪೊಗಳಿಗೆ ಬಿಯರ್ ತಯಾರಿಕಾ ಕಂಪನಿಗಳು ಮಾರುಕಟ್ಟೆ ಬೇಡಿಕೆ ಆಧರಿಸಿ ಶೇ 30 ರಷ್ಟು ಮೂಲ ಬೆಲೆಗೆ ಬಿಯರ್ ಪೂರೈಸುತ್ತವೆ. ದಾಸ್ತಾನು ಪೂರೈಸುವ ಪೂರ್ವದಲ್ಲಿ ಅಬಕಾರಿ ಸುಂಕ ಹಾಗೂ ಹೆಚ್ಚುವರಿ ಅಬಕಾರಿ ಸುಂಕವನ್ನು ಸರ್ಕಾರಕ್ಕೆ ಪಾವತಿಸಿರುತ್ತವೆ.
ಪಾನೀಯ ನಿಗಮಕ್ಕೆ 6 ಬಿಯರ್ ತಯಾರಿಕಾ ಕಂಪನಿಗಳು ದಾಸ್ತಾನು ಪೂರೈಸುತ್ತವೆ. ಬಿಯರ್ ಬಳಕೆಗೆ ಆರು ತಿಂಗಳು ವಾಯಿದೆ ಇರುತ್ತದೆ. ಈ ಬಾರಿ ಬೇಸಿಗೆಯಲ್ಲಿ ಬೇಡಿಕೆ ಅಧಿಕವಾಗುವ ನಿರೀಕ್ಷೆಯಿಂದ ಉತ್ಪಾದನೆ ಹೆಚ್ಚಿಸಲಾಗಿತ್ತು. ಆದರೆ, ಲಾಕ್ಡೌನ್ ಪರಿಣಾಮ ಬೇಡಿಕೆ ತಗ್ಗಿತು.
ಕೊರೊನಾ ಸೋಂಕು ಹರಡುವ ಭೀತಿಯಿಂದ ಸರ್ಕಾರ ಮದ್ಯ ಮಾರಾಟ ನಿರ್ಬಂಧಿಸಿತು. ಕಳೆದ ವರ್ಷ ಹಾಗೂ ಈಗಿನ ಲಾಕ್ಡೌನ್ ಸಂದರ್ಭದಲ್ಲಿ ಮಾರಾಟವಾಗದೇ ಉಳಿದ ಬಿಯರ್ ಈಗ ವ್ಯರ್ಥವಾಗಿದೆ.
‘ಹುಬ್ಬಳ್ಳಿಯ ಕೆಎಸ್ಬಿಸಿಎಲ್ ಡಿಪೊ ಒಂದರಲ್ಲೇ 775 ಬಿಯರ್ ಕೇಸ್ಗಳ ಅವಧಿ ಮುಗಿದಿವೆ. ಇದರಿಂದ ಅಂದಾಜು ₹15.50 ಲಕ್ಷ ನಷ್ಟವಾಗಿದೆ’ ಎಂದು ಡಿಪೊ ವ್ಯವಸ್ಥಾಪಕ ಮಹೇಶ್ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
ಕೊರೊನಾ ಭೀತಿಯೂ ಕಾರಣ:
ಬಿಯರ್ ಬಳಕೆ ಕಡಿಮೆಯಾಗಲು ಕೊರೊನಾ ಭೀತಿಯೂ ಕಾರಣವಾಗಿದೆ. ತಣ್ಣನೆಯ ಬಿಯರ್ ಕುಡಿಯುವುದರಿಂದ ಕೊರೊನಾ ಸೋಂಕು ಹರಡಲಿದೆ ಎಂಬ ವದಂತಿ ಹಬ್ಬಿ ಬೇಡಿಕೆ ತಗ್ಗಿದೆ ಎನ್ನಲಾಗಿದೆ.
ಲಾಕ್ಡೌನ್ ಸಡಿಲಿಕೆ ಬಳಿಕವೂ ಬೆಂಗಳೂರಿನಿಂದ 15–20 ಲಕ್ಷ ವಲಸೆ ಕಾರ್ಮಿಕರು ಊರುಗಳಿಗೆ ವಾಪಸ್ ಆಗಿರುವುದರಿಂದ ಬಿಯರ್ ಹಾಗೂ ಇತರೆ ಐಎಂಎಲ್ ಮದ್ಯದ ಬಳಕೆ ಪ್ರಮಾಣ ತಗ್ಗಬಹುದು ಎಂದು ಕರ್ನಾಟಕ ಬ್ರೇವರೀಸ್ ಮತ್ತು ಡಿಸ್ಟಿಲರಿ ಅಸೋಸಿಯೇಷನ್ ಅಂದಾಜಿಸಿದೆ.
ರಾಜ್ಯ ಪಾನೀಯ ನಿಗಮದಲ್ಲಿ ಎಲ್ಲ ವಹಿವಾಟು ಸಂಪೂರ್ಣ ಆನ್ಲೈನ್ನಲ್ಲಿ ನಡೆಯುವುದರಿಂದ ಅವಧಿ ಮುಗಿಯುವ ಮದ್ಯವನ್ನು 15 ದಿನಕ್ಕೆ ಮುಂಚೆಯೇ ವಿಲೇವಾರಿ ಮಾಡಲಾಗುವುದು. ಆದರೆ, ಈ ಬಾರಿ ಲಾಕ್ಡೌನ್ ನಿರ್ಬಂಧದಿಂದ ಮಾರಾಟ ಸ್ಥಗಿತವಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.