ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಇದೇ ಶುಕ್ರವಾರ ನಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿಯ ಉನ್ನತ ಮೂಲಗಳು ಹೇಳಿವೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವರಿಷ್ಠರ ಅನುಮತಿ ಪಡೆದು ನಾಳೆ (ಬುಧವಾರ) ಪಟ್ಟಿ ಆಖೈರುಗೊಳಿಸಲಿದ್ದಾರೆ. ಅಗತ್ಯವಿದ್ದರೆ, ಗುರುವಾರ ದೆಹಲಿಗೆ ಹೋಗಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.
ಒಂದು ವೇಳೆ ಶುಕ್ರವಾರ ಆಗದೇ ಇದ್ದರೆ ಭಾನುವಾರ ಖಚಿತ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೆಲವು ಹಿರಿಯರನ್ನು ಕೈಬಿಡುವ ಚಿಂತನೆಯೂ ನಡೆದಿದೆ. ಇದಕ್ಕೆ ವರಿಷ್ಠರ ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ. ಕೆಲವು ಸ್ಥಾನಗಳನ್ನು ಭರ್ತಿ ಮಾಡದೇ ಉಳಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದರು.
ಈ ಮಧ್ಯೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಶಾಸಕ ಮಹೇಶ್ ಕುಮಠಳ್ಳಿ, ಸಚಿವ ಸ್ಥಾನವೋ ನಿಗಮ– ಮಂಡಳಿಯೋ ಏನು ಸಿಗುತ್ತದೆಯೋ ಗೊತ್ತಿಲ್ಲ. ಯಾರಿಗೆ ಏನು ನೀಡಬೇಕುಎಂಬುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟಿದ್ದು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಮತ್ತೊಬ್ಬ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ವಿಸ್ತರಣೆ ಬಗ್ಗೆ ಏನೂ ಮಾತನಾಡುವುದಿಲ್ಲ. ಸ್ವಲ್ಪ ದಿನ ಕಾಯಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದರು.