ಬೈಂದೂರು: ಬೈಂದೂರು–ಶಿರೂರು ನಡುವೆ ತೀರ ಕಡಿದಾದ ಏರುದಾರಿ ಇರುವ ಒತ್ತನಣೆಯಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಸವಾಲಾಗಿ ಪರಿಣಮಿಸಿದೆ. ಕಳೆದೆರಡು ಮಳೆಗಾಲದಲ್ಲಿ ತೀವ್ರವಾದ ಸಮಸ್ಯೆ ಆಗಿದ್ದ ಭೂ ಕುಸಿತ ತಡೆಗೆ ಹೊಸ ಪ್ರಯೋಗಕ್ಕೆ ಐಆರ್ಬಿ ನಿರ್ಮಾಣ ಸಂಸ್ಥೆ ಮುಂದಾಗಿದೆ.
ಎತ್ತರದ ಗುಡ್ಡ ಇಳಿಜಾರುಗೊಳಿಸಿ ಅಲ್ಲಿ ಕಾಂಕ್ರೀಟ್ ಮೇಲ್ಪದರು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿನ ಮಣ್ಣಿನ ಮೃದುತ್ವ ಮತ್ತು ನೀರಿನ ಹರಿವಿನ ಮುಂದೆ ಈ ಪ್ರಯೋಗ ಯಶಸ್ವಿಯಾಗುವುದೇ ಎನ್ನುವುದನ್ನು ಮಳೆಗಾಲದಲ್ಲಿ ಕಾಣಬಹುದು.
ಒತ್ತಿನಣೆ ಏರುದಾರಿ ಉದ್ದ 400 ಮೀಟರ್ಗಳು. ಅದರ ನಡುವೆ 90ನೇ ತಿರುವು ಇದೆ. ಈ ತಿರುವಿನ ತೀವ್ರತೆ ಕಡಿಮೆ ಮಾಡಿ, ನೇರಗೊಳಿಸುವ ಉದ್ದೇಶದಿಂದ ಒತ್ತಿನಣೆ ಗುಡ್ಡವನ್ನು ಸುಮಾರು 8–10 ಮೀಟರ್ಗಳಷ್ಟು ತಗ್ಗಿಸಿ ಹೆದ್ದಾರಿ ನಿರ್ಮಿಸಲಾಯಿತು.
ಇದಕ್ಕೆ ಮುನ್ನ ಗುಡ್ಡದ ಮಣ್ಣಿನ ಸ್ವರೂಪದ ಬಗ್ಗೆ ಗುತ್ತಿಗೆದಾರ ಸಂಸ್ಥೆ ಸರಿಯಾದ ಪೂರ್ವ ಪರೀಕ್ಷೆ ನಡೆಸಲಿಲ್ಲ. ಇಲ್ಲಿರುವುದು ನೀರಿಗೆ ಕರಗುವ ಬಿಳಿಬಣ್ಣದ ಶೇಡಿ ಮಣ್ಣು. ಮಳೆಗಾಲ ಆರಂಭವಾಗುತ್ತಿದ್ದಂತೆ ಗುಡ್ಡದ ಮೇಲಿನಿಂದ ಹರಿದುಬಂದ ಪ್ರವಾಹದೋಪಾದಿಯ ನೀರು ಇಕ್ಕಡೆಯ ಗುಡ್ಡಗಳನ್ನು ಕೊಚ್ಚಿಹಾಕಿತು. ಅಗಾಧ ಪ್ರಮಾಣದ ಮಣ್ಣು ರಸ್ತೆ ಮೇಲೆ ಹರಡಿಕೊಂಡಿತು. ಸಂಸ್ಥೆ ಹಲವು ಯಂತ್ರ ಬಳಸಿ ಮಣ್ಣನ್ನು ಸರಿಸುವ ಕೆಲಸ ಮಾಡಿತು ಇದು ಮಳೆಗಾಲದ ಸಂಚಾರಕ್ಕೆ ವ್ಯತ್ಯಯ ಉಂಟು ಮಾಡಿತ್ತು.
ಕಳೆದ ವರ್ಷದ ಮಳೆಗಾಲದಲ್ಲಿ ಗುಡ್ಡ ಕುಸಿತ ತೀವ್ರ ಅಪಾಯಕಾರಿ ಹಂತ ತಲಪಿತು. ಮಣ್ಣಿನೊಂದಿಗೆ ಬಂಡೆಗಳೂ ಕುಸಿದು ಹೆದ್ದಾರಿ ಮೇಲುರುಳಿದುವು. ಎರಡು–ಮೂರು ದಿನ ಸಂಚಾರ ಸ್ಥಗಿತವಾಯಿತು. ಹಗಲು ಇರುಳು ಪೊಲೀಸ್ ಕಾವಲು ಹಾಕುವಂತಹ ಸ್ಥಿತಿ ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತವೂ ಗುತ್ತಿಗೆದಾರ ಕಂಪನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿತು.
ಈಗ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಐಆರ್ಬಿ ಕಂಪೆನಿ ಯೋಜನಾ ವ್ಯವಸ್ಥಾಪಕ ಯೋಗೇಂದ್ರಪ್ಪ, ’ಕಳೆದೆರಡು ವರ್ಷ ಗುಡ್ಡ ಕುಸಿತದಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿತ್ತು. ಹೀಗಾಗಿ ಮಳೆಗಾಲಕ್ಕೆ ಸಾಕಷ್ಟು ಮುಂಚಿತವಾಗಿ ಪ್ರೊಟೆಕ್ಷನ್ ವಾಲ್ ಕಾಮಗಾರಿ ನಡೆಸಲಾಗಿದೆ ಎಂದರು.
ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಕಂಪನಿಯ ಸಿಬ್ಬಂದಿಗೆ ಎಚ್ಚರಿಕೆ ನೀಡಿಹೋಗಿದ್ದಾರೆ. ಕುಂದಾಪುರ ಉಪ ವಿಭಾಗಾಧಿಕಾರಿ ಭೂಬಾಲನ್ ಬಂದು ಪರಿಶೀಲಿಸಿ, ಕೆಲವು ಸೂಚನೆ ನೀಡಿದ್ದಾರೆ.
’ಸ್ಲೋಪ್ ಪ್ರೊಟೆಕ್ಷನ್ ವಾಲ್’
ಹೊಸದಾಗಿ ನಿರ್ಮಾಣ ಆಗುತ್ತಿರುವ ’ಸ್ಲೋಪ್ ಪ್ರೊಟೆಕ್ಷನ್ ವಾಲ್’ ಎಂದು ಗುತ್ತಿಗೆದಾರ ಸಂಸ್ಥೆಯ ಎಂಜಿನಿಯರ್ ಹೇಳುತ್ತಾರೆ. ಗುಡ್ಡ ಕಡಿದು ನಿರ್ಮಿಸಿದ ರಸ್ತೆಯ ಇಕ್ಕೆಲಗಳ ಎತ್ತರದ ಪ್ರದೇಶವನ್ನು ಇಳಿಜಾರು ಭೂಮಿಯಾಗಿ ಮಾರ್ಪಡಿಸಿ, ಅದರ ಮೇಲೆ ರಾಡ್ ಹಾಗೂ ಮೆಶ್ ಹರಡಿ, ತೆಳ್ಳಗಿನ ಕಾಂಕ್ರೀಟ್ ಹಾಕಲಾಗುತ್ತಿದೆ. ಗುಡ್ಡದ ಮೇಲೆ ಆಸ್ಟ್ರೇಲಿಯಾ ಮೂಲದ ಹುಲ್ಲು ಗಿಡಗಳನ್ನು ಬೆಳೆಸಲಾಗುತ್ತದೆ. ಅವುಗಳ ಬೇರುಗಳು ಆಳಕ್ಕೆ ಹೋಗುವುದರಿಂದ ಮಣ್ಣಿನ ಸವಕಳಿ ಕನಿಷ್ಠ ಮಟ್ಟಕ್ಕಿಳಿಯುತ್ತದೆ. ಹಿಂದಿನಂತೆ ನೀರಿನೊಂದಿಗೆ ಮಣ್ಣು ಹರಿದುಬರುವುದು ನಿಲ್ಲುತ್ತದೆ ಎಂದು ಸಿಬ್ಬಂದಿ ಹೇಳುತ್ತಾರೆ
ಎಸ್. ಜನಾರ್ದನ ಮರವಂತೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.