ನವದೆಹಲಿ: ಕೊರೊನಾ ಹರಡದಂತೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಆಯಾ ರಾಜ್ಯಗಳ ಅಪಾಯ ನಿರ್ವಹಣಾ ನಿಧಿ (ಎಸ್ಡಿಆರ್ಎಫ್) ಅಡಿ ಕೇಂದ್ರದ ಗೃಹ ಸಚಿವಾಲಯವು ಶುಕ್ರವಾರ ₹11,092 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದೆ.
ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸ್ಥಿತಿಗತಿಯ ಕುರಿತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಯವರ ಜೊತೆ ಗುರುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರನ್ಸ್ ಮೂಲಕ ಚರ್ಚಿಸಿ ಅನುದಾನ ಒದಗಿಸುವ ಭರವಸೆ ನೀಡಿದ್ದರು.
ಕರ್ನಾಟಕಕ್ಕೆ ಈ ಮೂಲಕ ₹ 395.50 ಕೋಟಿ ಒದಗಿಸಲಾಗಿದೆ.
ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ಅಗತ್ಯವಿರುವ ಅನುದಾನವನ್ನು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಪಡೆಯಲು ಮಾರ್ಚ್ 13ರಂದು ಅವಕಾಶ ನೀಡಿದ್ದ ಕೇಂದ್ರ, ಇದೀಗ ಹೆಚ್ಚುವರಿ ಅನುದಾನ ಮಂಜೂರು ಮಾಡಿದೆ.
ಕೊರೊನಾ ಪೀಡಿತರಿಗೆ ಪ್ರತ್ಯೇಕ ವಾಸದ (ಕ್ವಾರಂಟೈನ್) ಸೌಲಭ್ಯ, ಮಾದರಿ ಸಂಗ್ರಹಣೆ– ತಪಾಸಣೆ, ಹೆಚ್ಚುವರಿ ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆ, ಆರೋಗ್ಯ ರಕ್ಷಣೆ, ಸ್ಥಳೀಯ ಸಂಸ್ಥೆ, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಸಾಧನಗಳ ಖರೀದಿ, ಥರ್ಮಲ್ ಸ್ಕ್ಯಾನರ್, ವೆಂಟಿಲೇಟರ್, ಏರ್ ಪ್ಯೂರಿಫೈಯರ್ ಹಾಗೂ ಸರ್ಕಾರಿ ಆಸ್ಪತ್ರೆಗಳ ಉಪಕರಣಗಳ ಖರೀದಿಗಾಗಿ ಈ ಹಣ ವ್ಯಯಿಸಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.