ಬೆಳಗಾವಿ: ಮಾರಕ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಂಕಷ್ಟಕೀಡಾದ ರೈತರಿಗೆ ನೆರವಾಗುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ, ಅವರಿಂದ ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸಿ ಸಾರ್ವಜನಿಕರಿಗೆ ಹಂಚುತ್ತಿದ್ದಾರೆ.
ಕ್ಷೇತ್ರದ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ರೈತ ಹಣುಮಂತ ಅವರು 3 ಎಕರೆ ಪ್ರದೇಶದಲ್ಲಿ ಬೆಳೆದ 30 ಟನ್ ಕಲ್ಲಂಗಡಿ ಹಾಗೂ ಸೀಬೆ (ಪೇರಲ) ಹಣ್ಣುಗಳನ್ನು ಭಾನುವಾರ ಖರೀದಿಸಿದರು. ‘ಅವುಗಳನ್ನು ಸಾರ್ವಜನಿಕರು ಮತ್ತು ಕೊರೊನಾ ವಿರುದ್ಧ ಹೋರಾಡುತ್ತಿರುವ ಯಮಕನಮರಡಿ ಹಾಗೂ ಜಿಲ್ಲಾ ವ್ಯಾಪ್ತಿಯ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಹಂಚಲಾಗುವುದು’ ಎಂದು ತಿಳಿಸಿದರು.
‘ಲಾಕ್ಡೌನ್ನಿಂದಾಗಿ ಫಸಲು ಮಾರಾಟ ಮಾಡಲಾಗದೆ ಫಸಲನ್ನು ರೈತರು ನಾಶಪಡಿಸುತ್ತಿದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖರೀದಿಸಿ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುತ್ತಿದ್ದೇವೆ. ಎಲ್ಲ ಜನಪ್ರತಿನಿಧಿಗಳೂ ಈ ರೀತಿ ಮಾಡುವ ಮೂಲಕ ರೈತರ ಬೆನ್ನೆಲುಬಾಗಿ ನಿಲ್ಲಬೇಕು’ ಎಂದರು.
‘ಮೇ 3ರ ಬಳಿಕ ಲಾಕ್ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸಬೇಕು. ಸಂಪೂರ್ಣ ಬಂದ್ ಮಾಡಿದರೆ ಬಹಳ ತೊಂದರೆಯಾಗುತ್ತದೆ. ಕಾರ್ಖಾನೆ, ಕೃಷಿ ಚಟುವಟಿಕೆಗಳು ನಡೆಯುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಹೆಬ್ಬಾಳ ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶ ಮಗದುಮ, ಮುಖಂಡರಾದ ಮಲ್ಲಗೌಡ ಪಾಟೀಲ, ಪರೇಶಗೌಡ, ಕಿರಣ ರಜಪೂತ, ಸುಧೀರ ಗಿರಿಗೌಡ, ಅಪ್ಪಾಗೌಡ ಪಾಟೀಲ, ರಾಜು ಅವಟೆ ಇದ್ದರು.