ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಅನಗತ್ಯ ತಿರುಗಾಟ ತಡೆಗೆ ಜನರಿಂದಲೇ ನಿರ್ಣಯ, ಹೊರಬಂದ್ರೆ ₹ 1000 ದಂಡ

ಹೊಂಗನೂರು ನಾಯಕರ ಬೀದಿಯಲ್ಲಿ ಯಜಮಾನರ‌ ಫರ್ಮಾನು
Last Updated 25 ಮಾರ್ಚ್ 2020, 10:14 IST
ಅಕ್ಷರ ಗಾತ್ರ

ಚಾಮರಾಜನಗರ: ಕೊರೊನಾ ವೈರಸ್ ಹರಡುವುದನ್ನು ತಡೆಯುವ ಪ್ರಯತ್ನವಾಗಿ ತಾಲ್ಲೂಕಿನ ಹೊಂಗನೂರು ಗ್ರಾಮದ ನಾಯಕ ಸಮುದಾಯದ ಯಜಮಾನರು ನಿರ್ಣಯವೊಂದನ್ನು ಕೈಗೊಂಡಿದ್ದು, ಸಮುದಾಯದ ಜನ ಅನಗತ್ಯವಾಗಿ ಮನೆಯಿಂದ ಹೊರಗಡೆ ಬಂದು ಗುಂಪು ಸೇರಿದರೆ ₹ 1000 ದಂಡ ಹಾಕುವುದಾಗಿ ಘೋಷಿಸಿದ್ದಾರೆ.

ಹೊಂಗನೂರಿನ ನಾಯಕರ ಬೀದಿಗಳಲ್ಲಿ 350 ಮನೆಗಳಿವೆ. ನಿರ್ಣಯದ ಬಗ್ಗೆ ಬೀದಿಯಲ್ಲಿ ಧ್ವನಿ ವರ್ಧಕದಲ್ಲಿ ಘೋಷಣೆಯನ್ನೂ ಮಾಡಲಾಗಿದೆ.

'ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಜನರು ಕೂಡ ಸರ್ಕಾರಕ್ಕೆ ಸಹಕಾರ ನೀಡಬೇಕು. ಈ ಉದ್ದೇಶದಿಂದ ಬುಧವಾರ ಬೆಳಿಗ್ಗೆ‌ ಸಮುದಾಯದ ಯಜಮಾನರು ಸಭೆ ಸೇರಿ ಈ ನಿರ್ಣಯಕ್ಕೆ ಬಂದಿದ್ದಾರೆ' ಎಂದು ಸಮುದಾಯದ ಮುಖಂಡ, ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರು ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಅಗತ್ಯ ವಸ್ತುಗಳ ಖರೀದಿಗಾಗಿ ಒಬ್ಬೊಬ್ಬರು ಹೊರಗಡೆ ಬರಬಹುದು. ಆದರೆ ಮೂರು ಜನರಿಗಿಂತ ಜಾಸ್ತಿ ಅನಗತ್ಯವಾಗಿ ಗುಂಪು ಕೂಡುವಂತಿಲ್ಲ. ದಂಡದ ಭಯಕ್ಕಾದರೂ ಜನರು ಹೊರಗಡೆ ಬರದಿರಲಿ ಎಂಬುದು ನಿರ್ಣಯದ ಉದ್ದೇಶ' ಎಂದರು.

ವಸ್ತುಗಳ ಖರೀದಿಗೆ ಸಮಯ ನಿಗದಿ

ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ‌ ಸಮಯ ನಿಗದಿ‌ ಪಡಿಸಿ‌ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಮತ್ತು ಸಂಜೆ 5ರಿಂದ 7ರವರೆಗೆ ಸಮಯ‌ ನಿಗದಿ ಪಡಿಸಲಾಗಿದೆ. ಈ ಅವಧಿಯಲ್ಲಿ ಮಾತ್ರ ಅಂಗಡಿಗಳು ತೆರೆಯಲಿದ್ದು, ಜನರು ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT