ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗಳ ಆಟ – ರೋಗಿಗಳಿಗೆ ಸಂಕಟ

ಕೋವಿಡ್‌ ಪೀಡಿತರಿಗೆ ಚಿಕಿತ್ಸೆ ನಿರಾಕರಿಸಿದರೆ ಕ್ರಿಮಿನಲ್‌ ಮೊಕದ್ದಮೆ: ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಎಚ್ಚರಿಕೆ
Last Updated 5 ಜುಲೈ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಹಾಸಿಗೆ ಲಭ್ಯವಿಲ್ಲ, ಪರೀಕ್ಷೆ ವರದಿ ತಂದಿಲ್ಲ... ಹೀಗೆ ನಾನಾ ನೆಪ ಹೇಳಿ ಖಾಸಗಿ ಆಸ್ಪತ್ರೆಗಳು ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿವೆ. ಇದರಿಂದಾಗಿ, ಆಸ್ಪತ್ರೆಗಳ ಕದ ತಟ್ಟಿ ರೋಗಿಗಳು ಹೈರಾಣಾಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲೂ ಸೂಕ್ತ ಚಿಕಿತ್ಸೆ ಸಿಗದೆ ಸಂಕಟ ಅನುಭವಿಸುತ್ತಿದ್ದಾರೆ.

ಇದರ ಬೆನ್ನಲ್ಲೇ, ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದಾಗಿ ರಾಜ್ಯ ಸರ್ಕಾರ ಭಾನುವಾರ ಎಚ್ಚರಿಕೆ ನೀಡಿದೆ.

ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಸರ್ಕಾರ ದರ ನಿಗದಿ ಮಾಡಿದೆ. ಅಲ್ಲದೆ, ಶಿಫಾರಸು ಮಾಡುವ ರೋಗಿಗಳಿಗೆ ಶೇ 50ರಷ್ಟು ಹಾಸಿಗೆಯನ್ನು ಕಡ್ಡಾಯವಾಗಿ ಕಾಯ್ದಿರಿಸಬೇಕು ಎಂದೂ ಸೂಚಿಸಿದೆ.

ಬೆಂಗಳೂರಿನಲ್ಲಿ ಚಿಕಿತ್ಸೆಗೆ ಗುರುತಿಸಲಾದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಒಟ್ಟು 3,331 ಹಾಸಿಗೆಗಳು ಲಭ್ಯವಿದ್ದು, 733 ಹಾಸಿಗೆಗಳು ಮಾತ್ರ ಭರ್ತಿಯಾಗಿವೆ. ಇಷ್ಟಾಗಿಯೂ ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ. ರೋಗಿಗಳ ದೂರವಾಣಿ ಕರೆಯನ್ನೂ ಕೆಲವು ಆಸ್ಪತ್ರೆ ಸಿಬ್ಬಂದಿ ಸ್ವೀಕರಿಸುತ್ತಿಲ್ಲ. ಕೆಲವು ರೋಗಿಗಳು ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಮೃತಪಟ್ಟಿದ್ದಾರೆ.

‘ಖಾಸಗಿ ಆಸ್ಪತ್ರೆಗಳು ಶಂಕಿತರ ಗಂಟಲ ದ್ರವ ಪರೀಕ್ಷೆಗೆ ₹4 ಸಾವಿರ ನಿಗದಿ ಮಾಡಿವೆ. ಸಿಬ್ಬಂದಿ ಪಿಪಿಇ ಕಿಟ್‌ ಧರಿಸಿಕೊಂಡು ಪರೀಕ್ಷೆ ಮಾಡುತ್ತಿದ್ದು, ಹೆಚ್ಚುವರಿಯಾಗಿ ₹1 ಸಾವಿರ ಪಾವತಿಸಬೇಕು ಎಂದು ಆಸ್ಪತ್ರೆಯವರು ಸುಲಿಗೆ ಮಾಡುತ್ತಿದ್ದಾರೆ. ಹೆಚ್ಚುವರಿ ಮೊತ್ತ ಪಾವತಿ ಮಾಡದಿದ್ದರೆ ವರದಿ ಕೊಡುವುದಿಲ್ಲ ಎಂಬ ಬೆದರಿಕೆ ಹಾಕುತ್ತಿದ್ದಾರೆ’ ಎಂದುಪರೀಕ್ಷೆ ಮಾಡಿಸಿಕೊಂಡ ಹಲವರು ಅಳಲು ತೋಡಿಕೊಂಡಿದ್ದಾರೆ.

‘ಗಂಭೀರ ಸ್ಥಿತಿಯಲ್ಲಿರುವ ರೋಗಿ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸುವ ಸಂಬಂಧ ಹಲವು ಆಸ್ಪತ್ರೆಗಳನ್ನು ಸಂಪರ್ಕಿಸಿದೆ. ಕೆಲವರು ಹಾಸಿಗೆ ಇಲ್ಲ ಎಂದು ಉತ್ತರಿಸಿದರು. ಇನ್ನೂ ಕೆಲವರು ದೂರವಾಣಿ ಕರೆ ಸ್ವೀಕರಿಸಲಿಲ್ಲ. ಅಂತಿಮವಾಗಿ ಹಲವು ಬಾರಿ ಮನವಿ ಬಳಿಕ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಶಾಸಕಿ ಸೌಮ್ಯಾ ರೆಡ್ಡಿ ಟ್ವೀಟ್ ಮಾಡಿದ್ದಾರೆ.

ಸಚಿವರ ದಿಢೀರ್‌ ಭೇಟಿ: ನಗರದ ಜಯನಗರದ ಸಾರ್ವಜನಿಕ ಆಸ್ಪತ್ರೆ ಮತ್ತು ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌, ತುರ್ತು ನಿಗಾ ಘಟಕ (ಐಸಿಯು) ಮತ್ತು ಇತರ ವಾರ್ಡುಗಳಲ್ಲಿರುವ ರೋಗಿಗಳ ಜತೆ ಸಂವಾದ ನಡೆಸಿ, ಚಿಕಿತ್ಸೆ ಗುಣಮಟ್ಟ ಮತ್ತು ಆಹಾರ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದರು.

ಜಯನಗರ ಆಸ್ಪತ್ರೆಯಲ್ಲಿ ನಿಗದಿತ ಸಂಖ್ಯೆ ತಜ್ಞರು ಇಲ್ಲದಿರುವುದು, ಪರೀಕ್ಷಾ ಮಾಹಿತಿ ಸರಿಯಾಗಿ ನಿರ್ವಹಣೆ ಮಾಡದಿರುವುದು, ರೋಗಿಗಳು ಕಾಯುತ್ತಿದ್ದರೂ ದಾಖಲು ಮಾಡದ ವಿಚಾರ ಸಚಿವರ ಗಮನಕ್ಕೆ ಬಂತು. ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡ ಸಚಿವರು, ಲೋಪಗಳನ್ನು ಸರಿಪಡಿಸಲು ತಾಕೀತು ಮಾಡಿದರು.

ಬಳಿಕ ಅವರು, ‘ಚಿಕಿತ್ಸೆಗೆ ಬರುವ ರೋಗಿಗಳನ್ನು ಆಸ್ಪತ್ರೆಯವರು ವಾಪಸ್‌ ಕಳುಹಿಸುವಂತಿಲ್ಲ. ಇದನ್ನು ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಗಳಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಇಷ್ಟರ ಮೇಲೆ ಚಿಕಿತ್ಸೆ ನಿರಾಕರಿಸಿದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ದೂರು ಇದ್ದರೆ ಕರೆ ಮಾಡಿ: ‘ಬೆಂಗಳೂರಿನಲ್ಲಿ. ಸೋಮವಾರದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ. ಒಂದು ವೇಳೆ ಚಿಕಿತ್ಸೆಗೆ ದಾಖಲು ಮಾಡಿಕೊಳ್ಳುವಲ್ಲಿ, ತಪಾಸಣೆಗೆ ಸಂಬಂಧಿಸಿದ ದೂರು ಇದ್ದಲ್ಲಿ, ಚಿಕಿತ್ಸೆ ನಿರಾಕರಿಸಿದರೆ 1912 ಸಂಖ್ಯೆಗೆ ಕರೆ ಮಾಡಿ. 24 ಗಂಟೆ ಕಾರ್ಯ ನಿರ್ವಹಿಸಲಿದ್ದು, ತಕ್ಷಣ ಸ್ಪಂದಿಸಲಾಗುತ್ತದೆ ಎಂದು ತಿಳಿಸಿದರು.

‘ಲಾಕ್‌ಡೌನ್‌ ಮತ್ತೆ ಇಲ್ಲ’

‘ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಮತ್ತೆ ಲಾಕ್‌ ಡೌನ್‌ ಜಾರಿ ಮಾಡುವುದಿಲ್ಲ. ಜನರು ತಮ್ಮ ಊರುಗಳಿಗೆ ಹೋಗುವುದು ಬೇಡ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಭಾನುವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಈಗಾಗಲೇ ಘೋಷಿಸಿದಂತೆ ಒಟ್ಟು ನಾಲ್ಕು ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಮಾಡಲು ನಿರ್ಧರಿಸಲಾಗಿದೆ. ಲಾಕ್‌ಡೌನ್‌ ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಪೊಲೀಸರ ಹಿತದೃಷ್ಟಿಯಿಂದ ಅವರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ’ ಎಂದು ಬೊಮ್ಮಾಯಿ ಹೇಳಿದರು.

ವಿಧಾನಸೌಧ: ಇಬ್ಬರಿಗೆ ಸೋಂಕು

ವಿಧಾನಸೌಧದ ಪಹರೆ ಮತ್ತು ನಿಗಾವಣೆ ಶಾಖೆಯಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಆಗಿರುವುದರಿಂದ ಸೋಮವಾರ ಬೆಳಿಗ್ಗೆ ಸಚಿವಾಲಯದ ಎಲ್ಲ ಶಾಖೆಗಳನ್ನು ಸ್ಯಾನಿಟೈಸ್‌ ಮಾಡಲಾಗುವುದು. ಆದ್ದರಿಂದ ವಿಧಾನಸೌಧದ ಎಲ್ಲ ಸಿಬ್ಬಂದಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಕಚೇರಿ ಕೆಲಸಕ್ಕೆ ಹಾಜರಾಗಲು ಸೂಚಿಸಲಾಗಿದೆ.

ವಿಧಾನಸಭೆ ಸಚಿವಾಲಯದ ಪ್ರತಿ ಶಾಖೆಯಲ್ಲಿ ಒಬ್ಬರು ಮಾತ್ರ ಬಂದು ಶಾಖೆಯ ಒಳಗೆ ಸ್ಯಾನಿಟೈಸ್ ಮಾಡುವಾಗ ನೋಡಿಕೊಳ್ಳಬೇಕು. 55 ವರ್ಷ ದಾಟಿದ ಅಧಿಕಾರಿ ಹಾಗೂ ನೌಕರರಿಗೆ ಒಂದು ದಿನ ಮಾತ್ರ ಸಭಾಧ್ಯಕ್ಷರ ಆದೇಶಾನುಸಾರ ರಜೆಯನ್ನು ಘೋಷಿಸಲಾಗಿದೆ.
***
ಪ್ರಕರಣಗಳು ದಿಢೀರ್‌ ಹೆಚ್ಚಿದ್ದರಿಂದ ಸಮಸ್ಯೆಯಾಗಿದೆ. ‌ಹಾಸಿಗೆ ಇದ್ದಲ್ಲಿ ಯಾರೂ ಚಿಕಿತ್ಸೆ ನಿರಾಕರಿಸುವುದಿಲ್ಲ‌.

- ಡಾ.ಎಸ್. ಶ್ರೀನಿವಾಸ್, ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕಾರ್ಯದರ್ಶಿ
***
ಆತಂಕದಿಂದ ಜನರು ಬೆಂಗಳೂರು ಬಿಟ್ಟು ತಮ್ಮ ಊರುಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಜಿಲ್ಲೆಗಳಲ್ಲಿ ಸೋಂಕು ಭೀತಿ ಹೆಚ್ಚಾಗುತ್ತಿದೆ. ದಯವಿಟ್ಟು ಜನರು ಬೆಂಗಳೂರಿನಲ್ಲಿ ಸುರಕ್ಷತೆಯಿಂದ ಇರಬೇಕು

- ಬಸವರಾಜ ಬೊಮ್ಮಾಯಿ, ಗೃಹ ಸಚಿವ
***
ರೋಗಿಗಳಿಗೆ ಯಾವುದೇ ಆಸ್ಪತ್ರೆ ಚಿಕಿತ್ಸೆ ನಿರಾಕರಿಸುವಂತಿಲ್ಲ. ಯಾವುದೇ ಅನಾನುಕೂಲಗಳು ಉಂಟಾದಲ್ಲಿ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ.

- ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT