ವಿಚಾರಣೆಗೂ ಮುನ್ನ ಬೆಳಿಗ್ಗೆ ಗೌರಮ್ಮರ ಆರೋಗ್ಯ ತಪಾಸಣೆ ನಡೆಯಿತು. ವೈದ್ಯರು ಅನುಮತಿ ನೀಡಿದ ಬಳಿಕವಷ್ಟೇ ಅಧಿಕಾರಿಗಳು ವಿಚಾರಣೆ ಆರಂಭಿಸಿದರು. ಪುತ್ರರಾದ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಸೋಮವಾರ ರಾತ್ರಿಯೇ ಕೋಡಿಹಳ್ಳಿಗೆ ಬಂದಿದ್ದು, ವಿಚಾರಣೆ ವಿಚಾರದಲ್ಲಿ ತಾಯಿಗೆ ಅಗತ್ಯ ಸಲಹೆ ನೀಡಿದ್ದರು. ಆದರೆ, ವಿಚಾರಣೆ ವೇಳೆ ಅವರಿಬ್ಬರನ್ನು ಅಧಿಕಾರಿಗಳು ದೂರ ಇರಿಸಿದ್ದರು. ಡಿಕೆಶಿ ಪತ್ನಿ ಉಷಾ, ಪುತ್ರಿ ಐಶ್ವರ್ಯ ಅವರೂ ಮನೆಯಲ್ಲಿದ್ದರು. ಪೊಲೀಸರು ಕಟ್ಟಡದ ಸುತ್ತ ಬಿಗಿ ಭದ್ರತೆ ಒದಗಿಸಿದ್ದರು. ಕುಟುಂಬ ಸದಸ್ಯರನ್ನು ಹೊರತುಪಡಿಸಿ ಅನ್ಯರಿಗೆ ಮನೆಯೊಳಗೆ ಪ್ರವೇಶ ನಿರಾಕರಿಸಲಾಗಿತ್ತು.